ರಾಯಚೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಇಂದಿರಾ ಕ್ಯಾಂಟಿನ್ಗಳಲ್ಲಿ ಗುರುವಾರದಿಂದ ಊಟ, ಉಪಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ.
ನಿರ್ಗತಿಕರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಆಹಾರ ನೀಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡು ಮೂರು ದಿನಗಳ ಬಳಿಕ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ದೇವದುರ್ಗದಲ್ಲಿ ಮೂರು ದಿನಗಳ ಹಿಂದೆಯೇ ಆಹಾರ ಉಚಿತವಾಗಿ ನೀಡುವುದಕ್ಕೆ ಆರಂಭಿಸಲಾಗಿದೆ.
‘ಸರ್ಕಾರವು ಸೂಚನೆ ನೀಡಿದ್ದನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ನಮ್ಮ ಗಮನಕ್ಕೆ ತರಲಿಲ್ಲ. ಸೂಚನಾ ಪತ್ರ ನೀಡುವುದು ತಾಡವಾದರೂ ಪರವಾಗಿಲ್ಲ. ಮೌಖಿಕವಾಗಿಯಾದರೂ ತಿಳಿಸಿದ್ದರೆ, ಅದೇ ದಿನದಿಂದ ಉಚಿತ ಆಹಾರ ಕೊಡುತ್ತಿದ್ದೇವು. ಗುರುವಾರದಿಂದ ಆದೇಶ ಪಾಲನೆ ಆಗುತ್ತಿದೆ’ ಎಂದು ಕ್ಯಾಂಟಿನ್ ಉಸ್ತುವಾರಿ ವಹಿಸಿಕೊಂಡವರು ತಿಳಿಸಿದರು.
ಎಂದಿನಂತೆ ಇಂದಿರಾ ಕ್ಯಾಂಟಿನ್ಗಳಲ್ಲಿ ಬೆಳಿಗ್ಗೆ 7.30 ರಿಂದ ಉಪಹಾರ ಆರಂಭವಾಗುತ್ತದೆ. ಮಧ್ಯಾಹ್ನ ಊಟ 12.30 ರಿಂದ ಆರಂಭಿಸಲಾಗುತ್ತದೆ ಹಾಗೂ ರಾತ್ರಿ ಊಟ 7 ರಿಂದ ಶುರುವಾಗುತ್ತದೆ. 500 ಜನರಿಗೆ ಉಪಹಾರ ಹಾಗೂ ಊಟ ನೀಡಲಾಗುತ್ತದೆ. ಸದ್ಯ ಲಾಕ್ಡೌನ್ ಇರುವುದರಿಂದ ಉಪಹಾರಕ್ಕೆ ಮಾತ್ರ 500 ಜನರು ಹಾಜರಾಗುತ್ತಿದ್ದಾರೆ. ಮಧ್ಯಾಹ್ನ 400 ರಿಂದ 500 ಜನರು ಊಟ ಮಾಡುತ್ತಿದ್ದರೆ, ರಾತ್ರಿ ಊಟಕ್ಕೆ 200 ರಿಂದ 300 ಜನರು ಬರುತ್ತಿದ್ದಾರೆ.
‘ಪ್ರತಿದಿನ ಗೋಶಾಲೆಯಲ್ಲಿ ಗೋವುಗಳಿಗೆ ಬಿಸಾಕಿದ ತರಕಾರಿ–ಹಣ್ಣು ಹಾಕುತ್ತೇನೆ. ಇದಕ್ಕೆ ಮಾಸಿಕ ₹8 ಸಾವಿರ ಕೂಲಿ ಕೊಡ್ತಾರೆ. ಟಾಟಾ ಏಸ್ ಮೂಲಕ ಮಾರ್ಕೆಟ್ನಿಂದ ಗೋಶಾಲೆಗೆ ಸಾಗಿಸುತ್ತೇನೆ. ಕೆಲಸದ ವೇಳೆ ಮಧ್ಯಾಹ್ನ ಕೇಂದ್ರ ಬಸ್ ನಿಲ್ದಾಣ ಪಕ್ಕದ ಇಂದಿರಾ ಕ್ಯಾಂಟಿನ್ನಲ್ಲಿಯೇ ಊಟ ಮಾಡುತ್ತಿದ್ದೇನೆ’ ಎಂದು ಗೋಶಾಲೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಅರಬ್ ಮೊಹಲ್ಲಾ ನಿವಾಸಿ ನಾಸೀರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.