ರಾಯಚೂರು: ‘ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದಿಸೆಯಲ್ಲಿ ಎಫ್ಟಿಕೆ ಕಿಟ್ ಒದಗಿಸಲಾಗಿದೆ. ಪಾಲಿಕೆ ಸಿಬ್ಬಂದಿ ಅದನ್ನು ಸಮರ್ಥವಾಗಿ ಬಳಸಿ ಜನರಿಗೆ ಗುಣಮಟ್ಟದ ನೀರು ಸರಬರಾಜು ಮಾಡಬೇಕು‘ ಎಂದು ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.
ಮಹಾನಗರಪಾಲಿಕೆ ವಲಯ ಕಚೇರಿಯ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜು ವಿಭಾಗದ ಸಿಬ್ಬಂದಿಗೆ ಆಯೋಜಿಸಿದ್ದ ನೀರು ಪರಿಕ್ಷೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನಗರದಲ್ಲಿ ಮೂರು ತಿಂಗಳಿಂದ ಎಫ್ಟಿಕೆ ಕಿಟ್ ಮೂಲಕ ನೀರಿನ ಪರಿಶುದ್ಧತೆಯನ್ನು ಪರಿಶೀಲಿಸಲಾಗುತ್ತಿದೆ. ನೀರು ಪೂರೈಕೆ ವಿಭಾಗದ ಪ್ರತಿಯೊಬ್ಬ ಸಿಬ್ಬಂದಿ ಇದರ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
‘ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಿಬ್ಬಂದಿ ಕುಡಿಯುವ ನೀರಿನ ಒಂಬತ್ತು ಮಾದರಿಗಳನ್ನು ಸಂಗ್ರಹಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಪ್ರಯೋಗಾತ್ಮವಾಗಿ ಪರಿಶೀಲಿಸಿದ ನಂತರ ನೀರು ಕುಡಿಯಲು ಯೋಗ್ಯವಿದೆಯೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಮಹಾನಗರಪಾಲಿಕೆಯ ಪ್ರತಿ ವಾರ್ಡ್ನಲ್ಲೂ ನೀರು ಪರೀಕ್ಷೆ ನಡೆಸಿದ ನಂತರವೇ ನೀರು ಪೂರೈಕೆ ಮಾಡಲಾಗುವುದು‘ ಎಂದು ಹೇಳಿದರು.
ಉಪ ಆಯುಕ್ಷೆ ಮೇನಕಾ ಪಟೇಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶಕುಮಾರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.