ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚೆರಿಕೆ ವಹಿಸಿರುವ ಜಿಲ್ಲಾಡಳಿತವು ಈ ವರ್ಷ ಅದ್ಧೂರಿಯಾಗಿ ಹಾಗೂ ಜನದಟ್ಟಣೆಯೊಂದಿಗೆ ಗಣೇಶೋತ್ಸವ ಆಚರಿಸಲು ಅವಕಾಶ ನೀಡುತ್ತಿಲ್ಲ.
ಪರಿಸರಸ್ನೇಹಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡುವುದು ಸೇರಿದಂತೆ, ಸರ್ಕಾರದ ಮಾರ್ಗದರ್ಶಿ ನಿಯಮಾನುಸಾರ ಸರಳವಾಗಿ ಆಚರಣೆ ಮಾಡಬೇಕು ಎಂದು ಬುಧವಾರ ನಡೆದ ಶಾಂತಿ ಪಾಲನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೊದಲಿನಿಂದಲೂ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಕೆಲವು ಕಡೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿದೆ.
ಗಣೇಶ ಮಂಡಳಿಗಳು ಪ್ರತಿದಿನವೂ ಸ್ಯಾನಿಟೈಜ್ ಮಾಡಬೇಕು. 20 ಕ್ಕೂ ಹೆಚ್ಚು ಜನರು ಒಂದೇ ಕಡೆಯಲ್ಲಿ ಇರುವಂತಿಲ್ಲ. ಪ್ರತಿವರ್ಷದಂತೆ ಖಾಸಭಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶ ಮಾಡಲಾಗಿದೆ. ಆದರೆ, ಗಣೇಶನ ಮೆರವಣಿಗೆ ಮಾಡವಂತಿಲ್ಲ. ಐದು ದಿನಗಳವರೆಗೆ ಮಾತ್ರ ಗಣೇಶ ಪ್ರತಿಷ್ಠಾಪಿಸಬೇಕು. ಕೊನೆಯ ದಿನದಂದು ನಗರಸಭೆಯಿಂದ ಸಂಚರಿಸುವ ವಾಹನಕ್ಕೆ ಗಣೇಶನನ್ನು ಹಸ್ತಾಂತರಿಸಬೇಕು. ಸಂಪ್ರದಾಯ ಪ್ರಕಾರವೇ ಖಾಸಭಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡುವುದಕ್ಕೆ ನಗರಸಭೆಯಿಂದಲೇ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಮನರಂಜನೆ ಇಲ್ಲ: ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡುವ ಕಡೆಗಳಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುವಂತಿಲ್ಲ. ಡಿಜೆ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ರಾಯಚೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಕಂಟೊನ್ಮೆಂಟ್ ಜೋನ್ಗಳನ್ನು ಗುರುತಿಸಿದ್ದು, ಅಂಥ ಕಡೆಗಳಲ್ಲಿ ಮನೆಯೊಳಗೆ ಮಾತ್ರ ಗಣೇಶೋತ್ಸವ ಮಾಡಿಕೊಳ್ಳಬೇಕು.
ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವ ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಬೇಕು.
ಜಿಲ್ಲೆಯಲ್ಲಿ ಈ ವರ್ಷ ಸರಳ ಗಣೇಶೋತ್ಸವ ಆಚರಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು, ಜಿಲ್ಲಾ ಪೊಲೀಸರು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.