ADVERTISEMENT

ರಾಯಚೂರಲ್ಲಿ ವಿದ್ಯುತ್‌ ಅಪಾಯದ ಸ್ಥಳ ಪಟ್ಟಿ ಮಾಡಿದ ಜೆಸ್ಕಾಂ: ಸುರಕ್ಷತೆಗೆ ಯೋಜನೆ

ಸುರಕ್ಷತಾ ಕ್ರಮ ವಹಿಸಲು ಯೋಜನೆ ರೂಪಿಸಿದ ಜೆಸ್ಕಾಂ

ನಾಗರಾಜ ಚಿನಗುಂಡಿ
Published 3 ನವೆಂಬರ್ 2019, 19:30 IST
Last Updated 3 ನವೆಂಬರ್ 2019, 19:30 IST
   

ರಾಯಚೂರು: ಜಿಲ್ಲೆಯಲ್ಲಿ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ಅಪಾಯ ಆಹ್ವಾನಿಸುತ್ತಿರುವ ಸ್ಥಳಗಳನ್ನು ಜೆಸ್ಕಾಂ ಎಂಜಿನಿಯರುಗಳು ಗುರುತಿಸಿದ್ದು, ಸುರಕ್ಷತಾ ಕ್ರಮ ವಹಿಸುವುದಕ್ಕೆ ಯೋಜನೆ ರೂಪಿಸುತ್ತಿದ್ದಾರೆ.

ಶಾಲಾ, ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳ ಸುತ್ತಮುತ್ತಲಿನ ಪರಿಸರಗಳನ್ನು ಆದ್ಯತೆಯಿಂದ ಅವಲೋಕಿಸಿರುವ ಎಂಜಿನಿಯರುಗಳು, ಅಪಾಯಕಾರಿ ಎಂದು ಕಂಡು ಬರುವ ತಾಣಗಳಲ್ಲಿ ಸುರಕ್ಷತೆ ಕೈಗೊಳ್ಳಲು ತಗಲುವ ವೆಚ್ಚದ ಅಂದಾಜು ಮಾಡುತ್ತಿದ್ದಾರೆ. ವೆಚ್ಚವನ್ನು ಯಾವ ಮೂಲಗಳಿಂದ ಪಡೆಯಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವು ಕಡೆ ನಗರಸಭೆ ಮೂಲಕವೂ ಮಾಡಬೇಕಾದ ಕಾಮಗಾರಿಗಳ ಪಟ್ಟಿ ಮಾಡಲಾಗಿದೆ.

ವಿದ್ಯುತ್‌ ಕಂಬಗಳ ಸ್ಥಳಾಂತರ, ವಿದ್ಯುತ್‌ ಪರಿವರ್ತಕಗಳ ಸ್ಥಳಾಂತರ, ವಿದ್ಯುತ್‌ ತಂತಿ ತಗುಲದಂತೆ ಇನ್ಶುಲಿನ ವ್ಯವಸ್ಥೆ ಅಳವಡಿಸುವುದು, ವಿದ್ಯುತ್‌ ಪರಿವರ್ತಕಗಳಿಗೆ ಸುರಕ್ಷತೆ ಬೇಲಿಗಳನ್ನು ಹಾಕುವುದು ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಯೋಜನೆ ಮಾಡಿದ್ದಾರೆ.

ADVERTISEMENT

ಕೊಪ್ಪಳದಲ್ಲಿ ಸರ್ಕಾರಿ ಹಾಸ್ಟೆಲ್‌ ಮೇಲೆ ನಡೆದ ವಿದ್ಯುತ್‌ ಅವಘಡದಿಂದ ಐದು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದು ಹಾಗೂ ಕವಿತಾಳ ಸಮೀಪ ಶಾಲೆಯೊಂದರ ಮೇಲೆ ಕೈಗೆಟಕುವ ವಿದ್ಯುತ್‌ ತಂತಿಯಿಂದಾಗಿ ವಿದ್ಯಾರ್ಥಿ ಮೃತಪಟ್ಟಿದ್ದ ಘಟನೆಗಳು ನಡೆದಿದ್ದವು. ಇಂತಹ ಅವಘಡಗಳು ಮರುಕಳಿಸಬಾರದು ಎಂದು ಮುಂಜಾಗ್ರತೆ ವಹಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಕೂಡಾ ಶಾಲೆಗಳ ಸುತ್ತಮುತ್ತ ವಿದ್ಯುತ್‌ ಅಪಾಯಕಾರಿ ತಾಣಗಳನ್ನು ಗುರುತಿಸಲು ಕ್ರಮ ಕೈಗೊಂಡಿದೆ.

ಜೆಸ್ಕಾಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿದ್ಯುತ್‌ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಯೋಜನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.