ಸಿಂಧನೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಸರ್ಕಾರ ರಾಜ್ಯ ಮತ್ತು ದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಕೊಲೆ ಘಟನೆಗಳು ಹೆಚ್ಚಾಗುತ್ತಿದ್ದು, ರಕ್ಷಣೆಯಲ್ಲಿ ಎರಡೂ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಹೋರಾಟಗಾರ ಚಂದ್ರಶೇಖರ ಗೊರಬಾಳ ಆರೋಪಿಸಿದರು.
ರಾಜ್ಯದ ಹಲವೆಡೆ ಪರಿಶಿಷ್ಟ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ಇವುಗಳಿಗೆ ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರುವುದು ಪರಿಶಿಷ್ಟ ಜಾತಿ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಅಶೋಕ ನಂಜಲದಿನ್ನಿ ಆಪಾದಿಸಿದರು.
ಕೊಲೆಯಾದ ಮಹಿಳೆಯ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ಘಟನೆಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಹೊಣೆಗಾರರನ್ನಾಗಿಸಿ, ಕ್ರಮ ಜರುಗಿಸಬೇಕು. ಪ್ರತಿ ತಿಂಗಳು ತಾಲ್ಲೂಕುವಾರು ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಪರಿಶಿಷ್ಟ ಜಾತಿ ಜನಾಂಗದವರ ಅಹವಾಲು ಸ್ವೀಕರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕಾನೂನು ಭಂಗ ಚಳವಳಿ ಅನಿವಾರ್ಯ ಎಂದು ಎಐಸಿಸಿಟಿಯು ಸಂಚಾಲಕ ನಾಗರಾಜ್ ಪೂಜಾರ್ ಎಚ್ಚರಿಸಿದರು.
ಮುಖಂಡ ಮಹಾದೇವ ಧುಮತಿ ಅವರು ಉಪತಹಶೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಡಿ.ಎಚ್.ಕಂಬಳಿ, ಬಿ.ಎನ್.ಯರದಿಹಾಳ, ನಾಗರಾಜ ಸಾಸಲಮರಿ, ಸಂಗಮೇಶ ಎಚ್.ಮುಳ್ಳೂರು, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಶಿವು ಬಸಾಪೂರ, ಹನುಮೇಶ ಜಾಲಿಹಾಳ, ಬಸವರಾಜ ತುರ್ವಿಹಾಳ, ನಾಗರಾಜ ಹೆಡಗಿಬಾಳ, ಚಾಂದಪಾಷಾ ಜಾಗೀರದಾರ್, ನಾಗರಾಜ ತುರ್ವಿಹಾಳ, ಗುರುರಾಜ ಎಸ್.ಮುಕ್ಕುಂದಾ, ಹಸೇನಪ್ಪ ಸೂಲಂಗಿ, ಮಹೆಬೂಬಸಾಬ, ಪಂಪಾಪತಿ ಬೂದಿವಾಳ, ಮಾನಯ್ಯ ಕಾನಿಹಾಳ, ಪರಶುರಾಮ ತಿಡಿಗೋಳ, ಉಮೇಶ ಸುಕಾಲಪೇಟೆ, ಶಂಕರ, ಹುಲ್ಲೇಶಪ್ಪ ಪ್ರಜಾರಿ, ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ನೂರಪ್ಪ ಸುಕಾಲಪೇಟೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.