ಲಿಂಗಸುಗೂರು: ‘ತಾಲ್ಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 15ನೇ ಹಣಕಾಸು ಯೋಜನೆ ನಿಯಮಗಳನ್ನು ಉಲ್ಲಂಘಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು‘ ಎಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅವರಿಗೆ ದೂರು ಸಲ್ಲಿಸಿದ ಅವರು, ’2020-21ನೇ ಸಾಲಿನಲ್ಲಿ ಬಂದಿರುವ 15ನೇ ಹಣಕಾಸು ಯೋಜನೆಯ ₹ 70.88 ಲಕ್ಷ ಕ್ರಿಯಾಯೋಜನೆ ಅನುಷ್ಠಾನಗೊಳಿಸುವಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಅನುಮೋದನೆ ಪಡೆಯದ ಕೆಲಸಗಳಿಗೆ ನಕಲಿ ಬಿಲ್ ಸೃಷ್ಠಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ‘ ಎಂದು ದೂರಿದರು.
‘ಯಾವುದೇ ವಸ್ತು ಖರೀದಿ ಮಾಡದೇ ಲಿಂಗಸುಗೂರು, ಗುರುಗುಂಟಾ, ಹಟ್ಟಿ ಸೇರಿದಂತೆ ಇತರೆ ಅಂಗಡಿಗಳ ಮಾಲೀಕರಿಗೆ ₹ 30.75 ಲಕ್ಷ ಬಿಲ್ ಪಾವತಿಸಿದ್ದು ಜಿಎಸ್ಟಿ ವಂಚನೆ ಮಾಡಲಾಗಿದೆ. ಕಾರಣ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು‘ ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಮುಖಂಡರಾದ ಶರಣೋಜಿ ಪವಾರ್, ಕೆಂಪ್ ಶಿವು, ರಾಮಜೆಟ್ಟಿ, ಯಂಕೋಬ, ಬಸವರಾಜ, ಅಮರೇಶ, ಛತ್ರಪತಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.