ADVERTISEMENT

ಗುಂಜಳ್ಳಿ: ಕುಡಿಯುವ ನೀರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 13:09 IST
Last Updated 11 ಜುಲೈ 2020, 13:09 IST
ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪಡೆಯಲು ನಿಂತಿರುವ ಗ್ರಾಮಸ್ಥರು
ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪಡೆಯಲು ನಿಂತಿರುವ ಗ್ರಾಮಸ್ಥರು   

ಸಿಂಧನೂರು:ಸಮೀಪದ ಗುಂಜಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಲ್ಲಿನ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇದ್ದಾರೆ ಎನ್ನುವುದು ಗ್ರಾಮಸ್ಥರ ಆಕ್ರೋಶವಾಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಪ್ರಿಲ್‌ನಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಕೆರೆಗೆ ಪೂರ್ಣ ಪ್ರಮಾಣದಲ್ಲಿ ತುಂಬಿಸದ ಕಾರಣ ಕುಡಿಯುವ ನೀರಿಗಾಗಿ ನಿರ್ಮಿಸಿದ ಕೆರೆಯ ನೀರು ಈಗ ಬತ್ತಿದೆ.

25 ವರ್ಷಗಳಿಂದ ನೀರಿನ ಸಮಸ್ಯೆಯೇ ಗೊತ್ತಿರಲಿಲ್ಲ. ಆಗಸ್ಟ್‌ ಬಂದರೂ ಕೆರೆಯಲ್ಲಿ ನೀರು ಇರುತ್ತಿತ್ತು. ಈ ಬಾರಿ ಕುಡಿಯುವ ನೀರಿನ ತಾಪತ್ರೆ ಉಂಟಾಗಿದೆ ಎಂದು ಗ್ರಾಮದ ಯುವಕ ನಿಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಳೆದ 15 ದಿನದ ಹಿಂದೆ ಕೆರೆಯ ನೀರು ಬಹುತೇಕ ಖಾಲಿಯಾಗಿದೆ. ಒಂದು ದಿನ ಗ್ರಾಮಕ್ಕೆ ಪೂರೈಕೆ ಆಗಬಹುದಾದಷ್ಟು ನೀರನ್ನು ಕೆರೆಯಲ್ಲಿ ಉಳಿಸಲಾಗಿದೆ.

ನೀರು ಬರಿದಾದ ದಿನಗಳಿಂದ ಸುಮಾರು 2 ಕಿ.ಮಿ. ದೂರದಲ್ಲಿರುವ ವಕ್ರಾಣಿಗಳಿಗೆ ಪ್ರತಿನಿತ್ಯ ನೀರಿಗಾಗಿ ಅಲೆದಾಡಬೇಕಾಗಿದೆ. ಕೆಲವರು ನೀರು ತುಂಬಲು ಅವಕಾಶ ಕೊಡುವುದಿಲ್ಲ. ಕೆರೆಯ ಮಾಲೀಕರಿಗೆ ದಯನೀಯ ರೀತಿಯಲ್ಲಿ ನೀರು ಕೇಳಿ ಪಡೆಯಬೇಕಾಗಿದೆ.

ಇಲ್ಲಿಯ ವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವ ಪ್ರಸ್ತಾಪವೇ ಇಲ್ಲ. ಇನ್ನು ಎಷ್ಟು ದಿನದವರೆಗೆ ಗ್ರಾಮಸ್ಥರು ನೀರಿಗಾಗಿ ಪರದಾಡಬೇಕೋ ತಿಳಿಯದಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿದರು ಫಲಕಾರಿಯಾಗಿಲ್ಲ ಎಂದು ಗ್ರಾಮದ ಯುವಕ ಸಂಗಮೇಶ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಮತ್ತು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು, ಗ್ರಾಮಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಚೇರಿಗೆ ಮತ್ತಿಗೆ ಹಾಕಬೇಕಾಗುತ್ತಿದೆ ಎಂದು ಯುವ ಮುಖಂಡ ಹನುಮೇಶ ನಾಯಕ ಬಾಗೋಡಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.