ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಜನವರಿ 12 ರಿಂದ 14 ರವರೆಗೆ ಹಾಲುಮತ ಸಂಸ್ಕೃತಿ ವೈಭವ–2020 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಸಮಾಜದ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 12 ರಂದು 108 ದೇವರ ಭಂಡಾರ ಪೂಜೆ, ಆನಂತರ ಹಾಲುಮತ–ಗಂಗಾಮತ ಸಮಾವೇಶ ಮಧ್ಯಾಹ್ನ 12 ಗಂಟೆಗೆ, 13 ರಂದು ಆದಿವಾಸಿ ಸಂಸ್ಕೃತಿ ಸಮಾವೇಶ ಪ್ರಶಸ್ತಿ ಪ್ರಧಾನ ಸಮಾರಂಭ, ಆನಂತರ ಸಂಜೆ 4ಕ್ಕೆ ಮುಕ್ತ ಟಗರು ಕಾಳಗ, 14 ರಂದು ಜಗದ್ಗುರು ರೇವಣಸಿದ್ದೇಶ್ವರ ಸಿದ್ಧರಾಮೇಶ್ವರ ಸ್ಮರಣೋತ್ಸವ ಬೆಳಿಗ್ಗೆ 11 ಗಂಟೆಗೆ, ಸಂಜೆ 4ಕ್ಕೆ ಎತ್ತುಗಳು ಭಾರ ಎಳೆಯುವ ಸ್ಪರ್ಧೆ ಸೇರಿದಂತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿಂದುಳಿದ ಹಲವು ಸಮುದಾಯಗಳನ್ನೊಳಗೊಂಡ ಈ ಸಮಾವೇಶದಲ್ಲಿ ಆದಿವಾಸಿ ಸ್ಥಿತಿ ಗತಿ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಈ ಮೂರು ದಿನಗಳ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಾಡಿನ ಪೂಜ್ಯರು ಮಠಾಧೀಶರು, ಮುಖ್ಯಮಂತ್ರಿ, ಕೇಂದ್ರ–ರಾಜ್ಯ ಸಚಿವರು, ಸಂಸದರು, ಶಾಸಕರು, ಮುಖಂಡರು ಆಗಮಿಸುವರು. ನಾಡಿನ ಸಮಸ್ತ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಕುರುಬ ಸಮುದಾಯದ ನಿರ್ದೇಶಕ ಎಂ.ಈರಣ್ಣ, ಮಹಾದೇವಪ್ಪ ಮಿರ್ಜಾಪುರ, ಕೆ.ಬಸವಂತಪ್ಪ, ಬಿ.ಬಸವರಾಜ, ನಾಗೇಂದ್ರಪ್ಪ, ಸಂಗಮೇಶ ಭಂಡಾರಿ, ರಾಜಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.