ಸಾಂದರ್ಭಿಕ ಚಿತ್ರ
ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ದಿನವಿಡೀ ಸುರಿದ ಜಿಟಿಜಿಟಿ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಠಿಯಾಯಿತು.
ತಾಲ್ಲೂಕಿನ ಪತ್ತೆಪುರ ಗ್ರಾಮದ ಹಳ್ಳ ದಾಟುತ್ತಿದ್ದ ಜಾಗೀರ ವೆಂಕಟಾಪುರ ಗ್ರಾಮದ ಯುವಕ ಬಸವರಾಜ (33) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಮಂಗಳವಾರ ರಾತ್ರಿ ಮಳೆ ಸುರಿದಿದೆ. ಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಬಸವರಾಜ ಸೇರಿ ಸುಮಾರು 8 ಜನ ಪರಸ್ಪರ ಕೈ ಹಿಡಿದುಕೊಂಡು ಹಳ್ಳ ದಾಟುತ್ತಿದ್ದರು. ಬಸವರಾಜ ಅವರು ಕೈಯಲ್ಲಿ ಹೆಲ್ಮೆಟ್ ಹಿಡಿದಿದ್ದರು. ಅದು ನೀರಿನಲ್ಲಿ ಬಿದ್ದ ಕಾರಣ ಕೈಬಿಟ್ಟಿದ್ದಾರೆ. ಹೀಗಾಗಿ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸವರಾಜ ಅವರು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಿನ ಸಿಯತಲಾಬ್, ನೀರಭಾವಿಕುಂಟಾ, ಜಲಾಲ್ ನಗರ, ಚಂದ್ರಬಂಡಾ ರಸ್ತೆಯ ಆಶ್ರಯ ಕಾಲೊನಿ ಸೇರಿದಂತೆ ಅನೇಕ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದೆ. ನಗರದ ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಭಾರಿ ನೀರು ನಿಂತಿದ್ದರಿಂದ ರೋಗಿಗಳು, ಸಂಬಂಧಿಕರು ಪರದಾಡಿದರು.
ತಾಲ್ಲೂಕಿನ ಇಡಪನೂರು ಗ್ರಾಮದ ಸೇತುವೆಯ ಭಾಗ ಕುಸಿದಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.