ADVERTISEMENT

ಕ್ಷಮೆಯಾಚಿಸಲು ಎಸ್.ಆರ್.ರೆಡ್ಡಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:22 IST
Last Updated 14 ಮೇ 2022, 2:22 IST

ರಾಯಚೂರು: ನಗರದ ಶಾಸಕ ಡಾ.ಶಿವರಾಜ ಪಾಟೀಲ ವಿರುದ್ಧ ತೆಲಂಗಾಣದ ನಾರಾಯಣಪೇಟೆ ಕ್ಷೇತ್ರದ ಶಾಸಕ ಎಸ್.ಆರ್.ರೆಡ್ಡಿ ಅವರು ಹಗುರವಾಗಿ ಹಾಗೂ ಅಸಂವಿಧಾನಿಕ ಪದ ಬಳಸಿದ್ದು ಖಂಡನೀಯ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸರೆಡ್ಡಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸಹಜ. ಆದರೆ, ಆರೋಪ ಮಾಡುವ ಭರದಲ್ಲಿ ಹದ್ದು ಮೀರಿ ಏಕವಚನದಲ್ಲಿ ಟೀಕಿಸಿರುವುದು ಅವರ ಘನತೆಗೆ ಶೋಭೆ ತರುವಂಥದ್ದಲ್ಲ.

ರಾಯಚೂರು ನಗರದಲ್ಲಿ ನೆಲೆಸಿರುವ ಅವರು ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಇದೇ ನಗರವನ್ನು ತಿಪ್ಪೆಗುಂಡಿಯಾಗಿದೆ ಎಂದು ಹೇಳುವ ಮೂಲಕ ಉದ್ಧಟತನ ಎಂದು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಯಚೂರು ಶಾಸಕರ ವಿರುದ್ಧ ದಬ್ಬಾಳಿಕೆ ನಡೆಸಲು ಬಂದರೆ ರಾಯಚೂರು ಜನ ತಕ್ಕ ಉತ್ತರ ನೀಡಬೇಕಾಗುತ್ತದೆ.ನವೋದಯ ಸಂಸ್ಥೆಯಲ್ಲಿ ದುಡಿಯುವ ಜನರಿಗೆ ನಿಯಮದಂತೆ ವೇತನ ಪಾವತಿಸದ ಅವರು, ನಮ್ಮ ಶಾಸಕರನ್ನು ಭ್ರಷ್ಟಾಚಾರಿ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮುಖಂಡ ರವೀಂದ್ರ ಜಲ್ದಾರ್ ಮಾತನಾಡಿ, ಎಸ್.ಆರ್.ರೆಡ್ಡಿಯವರು ತಮ್ಮ ಆಸ್ಪತ್ರೆ ಆವರಣದಲ್ಲಿ ಫುಡ್ ಕೋರ್ಟ್, ಹಾಸ್ಟೆಲ್, ಕ್ಲಾಸ್ ರೂಮ್ ಮುಂತಾದವುಗಳನ್ನು ನಿರ್ಮಿಸಿದ್ದು ಅವುಗಳಿಗೆ ಸೂಕ್ತ ಕರ ತುಂಬದ ಕಾರಣ ಅವರಿಗೆ ನಗರಸಭೆ ನೋಟಿಸ್ ನೀಡುತ್ತದೆ ಎಂದು ಹೇಳಿದರು.

ದಲಿತರ ಭೂಮಿ ಕಬಳಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅವರು ಯಾವುದೇ ವಾರ್ಡ್‍ಗೆ ಹೋದರೂ ಶಾಸಕರು ನೀಡಿರುವ ಅನುದಾನ ಮತ್ತು ಕೊಡುಗೆ ತಿಳಿಯುತ್ತದೆ. ಬೇಕಾದರೆ ಹೋಗಿ ನೋಡಿಬರಲಿ ಎಂದು ಸವಾಲು ಹಾಕಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಬಿಜೆಪಿ ಮುಖಂಡ ಕಡಗೋಲ ಆಂಜನೇಯ, ಬಿ.ಗೋವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.