ಸಿರವಾರ: ‘ಪಂಚಾಯಿತಿ ಕಚೇರಿಗೆ ಸಮಯಕ್ಕೆ ಬಾರದೇ ಅನೇಕ ಬಾರಿ ಗೈರಾಗಿರುವ ಸಿಬ್ಬಂದಿಯ ವಿವರ ಸಂಗ್ರಹಿಸಿದ್ದು, ಮುಂದೆ ಇದೇ ರೀತಿ ಗೈರಾಗಿ ಕರ್ತವ್ಯ ಲೋಪ ಕಂಡು ಬಂದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ (ನರೇಗಾ) ಶರ್ಫುನ್ನೀಸಾ ಬೇಗಂ ಅವರು ಹೇಳಿದರು.
ಅತ್ತನೂರು ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಕಚೇರಿ ಕಡತಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಕಚೇರಿಗೆ ಸಹಾಯಕ ನಿರ್ದೇಶಕರು ಭೇಟಿಯ ಮಾಹಿತಿಗೆ ಗೊತ್ತಿದ್ದರೂ ಸಹ ಸಿಬ್ಬಂದಿ ಗೈರಾಗಿರುವುದು ನೋಡಿದರೆ ಸಿಬ್ಬಂದಿಯ ಕೆಲಸ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದು ತಿಳಿಯುತ್ತದೆ ಎಂದರು.
ಹಾಜರಾತಿ ಪುಸ್ತಕವನ್ನು ಪರಿಶೀಲಿಸುತ್ತಾ ಸುಮಾರು ಎರಡು ತಿಂಗಳಿನಿಂದ ಹಾಜರಾತಿ ಪುಸ್ತಕದಲ್ಲಿ ಸಿಬ್ಬಂದಿಯು ಸಹಿ ಮಾಡದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಕಚೇರಿಗೆ ಬಾರದೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿದ್ದರು ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಹೇಗೆ ಪಾವತಿಸಲಾಗುತ್ತಿದೆ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು.
ಬೇಸಿಗೆ ಇರುವುದರಿಂದ ಅತ್ತನೂರು ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ಪ್ರತಿ ನಿತ್ಯ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಾಟರ್ ಮ್ಯಾನ್ ಅವರಿಗೆ ಎಚ್ಚರಿಕೆ ನೀಡಿದರು.
ಮೇ 15 ರಿಂದ ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಬಿಎಫ್ಟಿಗಳಿಂದ ಸಿದ್ದಪಡಿಸುವುದನ್ನು ಕಂಪ್ಯೂಟರ್ ಆಪರೇಟರ್ ಮತ್ತು ಪಿಡಿಒ ಅವರು ಮೇಲ್ವಿಚಾರಣೆ ಮಾಡಬೇಕು ಎಂದರು.
ನಂತರ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಪಿಡಿಒ ರಮೇಶ, ತಾಂತ್ರಿಕ ಸಹಾಯಕರಾದ ರಾಘವೇಂದ್ರ, ಅರುಣ ಕುಮಾರ, ಐಇಸಿ ಸಂಯೋಜಕ ರಾಜೇಂದ್ರ ಕುಮಾರ್, ಆಪರೇಟರ್ ರಂಗನಾಥ, ಕರವಸೂಲಿಗಾರ ಅಯ್ಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.