ADVERTISEMENT

ಸಾಲ ಪಾವತಿಸಿದರೆ ಬಡ್ಡಿ ಮನ್ನಾ: ಬಸವರಾಜಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 13:53 IST
Last Updated 9 ಮಾರ್ಚ್ 2020, 13:53 IST

ರಾಯಚೂರು: ರಾಜ್ಯ ಸರ್ಕಾರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ (ಪಿಎಲ್‌ಡಿ) ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮರು ಪಾವತಿ ಮಾಡಿದ್ದಲ್ಲಿ ಅದರ ಸಂಪೂರ್ಣ ಬಡ್ಡಿಮನ್ನಾ ಮಾಡಿದ್ದು, ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜಸ್ವಾಮಿ ಆಲ್ಕೂರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ 25-30 ವರ್ಷಗಳ ಹಿಂದೆ ಪಡೆದ ಸಾಲಕ್ಕೆ ಬಡ್ಡಿ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ರೈತರು ಕಟ್ಟಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು 2020ರ ಜನವರಿವರೆಗೆ ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಅಸಲು ಮಾತ್ರ ಕಟ್ಟಿದಲ್ಲಿ ಅದರ ಮೇಲಿನ ಸಂಪೂರ್ಣ ಬಡ್ಡಿ ಮನ್ನಾ ಆಗಲಿದೆ. ಮಾರ್ಚ್ 31 ರಂದು ಕೊನೆಯ ದಿನವಾಗಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆ ಕೃಷಿಯೇತರ ಚಟುವಟಿಕೆ ಸಾಲಕ್ಕೆ ಅನ್ವಯವಾಗುವುದಿಲ್ಲ ಎಂದರು.

ರಾಜ್ಯದಲ್ಲಿ 187 ಪಿಎಲ್‌ಡಿ ಬ್ಯಾಂಕ್ ಶಾಖೆಗಳಿದ್ದು, ರಾಯಚೂರು ತಾಲ್ಲೂಕಿನ ಪಿಎಲ್‌ಡಿ ಬ್ಯಾಂಕ್‌ನಲ್ಲಿ 1,087 ಖಾತೆದಾರರು ಯೋಜನೆಗೆ ಅರ್ಹರಿದ್ದಾರೆ. ಸುಮಾರು ₹2.30 ಕೊಟಿ ಸಾಲ ವಸೂಲಿ ಯಾಗಬೇಕಿದ್ದು, ₹6 ಕೋಟಿ ಬಡ್ಡಿ ಮನ್ನಾ ಆಗಲಿದೆ. ಈಗಾಗಲೇ ಈ ಯೋಜನೆ ಅಡಿಯಲ್ಲಿ 109 ಬ್ಯಾಂಕ್ ಖಾತೆದಾರರು ಸಾಲ ಪಾವತಿಸಿದ್ದು, ಅವರಿಗೆ ಹೊಸ ಸಾಲ ನೀಡಲಾಗುವುದು. ರೈತರು ಯೋಜನೆಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವಿರುಪಾಕ್ಷಪ್ಪ, ನರಸಿಂಹಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.