ರಾಯಚೂರು: ಜಿಲ್ಲೆಯಲ್ಲಿ ಒಂದು ಭಾಗದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಬರಗಾಲವಿದೆ. ಈ ವಿಲಕ್ಷಣದ ಸನ್ನಿವೇಶದಲ್ಲಿ ಅಧಿಕಾರಿಗಳು ಅತ್ಯಂತ ಜಾಗೃತರಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಹೇಳಿದರು.
ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿರುವುದರಿಂದ ನಾರಾಯಣಪುರ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ನದಿಪಾತ್ರದ ಪ್ರವಾಹ ಪೀಡಿತ ಸ್ಥಳಗಳಲ್ಲಿ ಹಾಗೂ ಪ್ರವಾಹ ಎದುರಾಗಲಿರುವ ಸ್ಥಳಗಳಲ್ಲಿ ಜೀವ ಹಾನಿಯಾಗದಂತೆ ರಕ್ಷಣಾತ್ಮಕ ಚಟುವಟಿಕೆ ಕೈಗೊಳ್ಳಬೇಕು. ನೀರು ನುಗ್ಗುವ ಪ್ರದೇಶದ ಜನ, ಜಾನುವಾರಗಳನ್ನು ಸ್ಥಳಾಂತರ ಮಾಡಿ ಗಂಜಿ ಕೇಂದ್ರ ತೆರೆಯಬೇಕು. ಗುಣಮಟ್ಟದ ಆಹಾರ ಪೂರೈಸಬೇಕು ಎಂದರು.
ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣ ಆಧರಿಸಿ ತೊಂದರೆ ಎದುರಾಗುವ ಗ್ರಾಮಗಳಿಗೆ ಮುಂಚಿತವಾಗಿ ತೆರಳಿ ಜನ ಹಾಗೂ ಜಾನುವಾರ ಸ್ಥಳಾಂತರಕ್ಕೆ ಕ್ರಮ ಜರುಗಿಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ರಜೆ ಪಡೆಯದೇ ಕೆಲಸ ಮಾಡಬೇಕು. ಅನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯಬಾರದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿ, ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಯರಗೋಡಿ ಮುಳುಗಡೆಯ ಹಂತದಲ್ಲಿದೆ. ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದೆ. ರಾಯಚೂರು ತಾಲ್ಲೂಕಿನ ದೇವಸುಗೂರು ಸೇತುವೆಗೆ ಯಾವುದೇ ಅಪಾಯ ಎದುರಾಗಿಲ್ಲ ಎಂದು ಮಾಹಿತಿ ನೀಡಿದರು.
ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಗಳಾದ ಓಂಕಾರ ಗಡ್ಡಿಯ ಒಂದು ಕುಟುಂಬದ 14 ಜನ, ಹಾರಲಗಡ್ಡಿಯ 10 ಕುಟುಂಬಗಳ 68 ಜನ ಮತ್ತು ಕರಕಲಗಡ್ಡಿಯ 3 ಕುಟುಂಬಗಳ 22 ಜನ ಸೇರಿದಂತೆ ಒಟ್ಟು 14 ಕುಟುಂಬಗಳ 104 ಜನರನ್ನು ರಕ್ಷಿಸಲಾಗಿದ್ದು, ಆಹಾರ ಸಾಮಾಗ್ರಿಯೂ ವಿತರಿಸಲಾಗಿದೆ. ಎರಡು ಆಂಬುಲೆನ್ಸ್ಗಳ ಜೊತೆ ಇಬ್ಬರು ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು ಮತ್ತು ಬೋಟ್ ಜೊತೆಗೆ 5 ಜನ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳದಲ್ಲಿದ್ದಾರೆ ಎಂದರು.
ರಾಯಚೂರು ತಾಲ್ಲೂಕಿನ ಕುರ್ವಕುಲಾ ಗ್ರಾಮದ 142 ಕುಟುಂಬಗಳ 450 ಜನ, ಅಗ್ರಹಾರದ 16 ಕುಟುಂಬಗಳ 45ಜನ ಮತ್ತು ಕುರ್ವಕುರ್ದ ಗ್ರಾಮದ 140 ಕುಟುಂಬಗಳ 450 ಜನರು ಸೇರಿದಂತೆ ಒಟ್ಟು 298 ಕುಟುಂಬಗಳ 945 ಜನರಿಗೆ ಆಹಾರ ಸಾಮಗ್ರಿ ಸಂಗ್ರಹಿಸಲಾಗಿದೆ.
ರಾಯಚೂರು ತಾಲ್ಲೂಕಿನ 15 ಗ್ರಾಮಗಳ 5,474 ಕುಟುಂಬಗಳು, ದೇವದುರ್ಗ 26 ಗ್ರಾಮಗಳ 5,080 ಕುಟುಂಬಗಳು ಮತ್ತು ಲಿಂಗಸುಗೂರು ತಾಲ್ಲೂಕಿನ 10 ಗ್ರಾಮಗಳ 1,831 ಕುಟುಂಬಗಳು ಸೇರಿದಂತೆ ಒಟ್ಟು 51 ಗ್ರಾಮಗಳ 12,385 ಕುಟುಂಬಗಳ 67,857 ಜನರು ನದಿ ದಡದ ಗ್ರಾಮಗಳಲ್ಲಿ ವಾಸವಿದ್ದಾರೆ. ನದಿಗೆ ಹರಿಬಿಡುವ ನೀರಿನ ಪ್ರಮಾಣ ಆಧರಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ನದಿ ತೀರದ ಗ್ರಾಮಗಳಲ್ಲಿ ಡಂಗುರ ಹಾಗೂ ದಿನಪತ್ರಿಕೆಗಳ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು.
ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಲು ಎನ್ಡಿಆರ್ಎಫ್ ತಂಡ ಜಿಲ್ಲೆಗೆ ಬಂದಿದೆ. ಮೂರು ತಾಲ್ಲೂಕಿಗೆ ತಲಾ ಎರಡು ಬೋಟ್ ಹಾಗೂ 15 ಜನ ಸಿಬ್ಬಂದಿ ನೇಮಿಸಲಾಗಿದೆ. ದೇವಸುಗೂರಿಗೆ ಮಹೇಶ ಪರಿಕ್ (9636091234, 905782417), ಲಿಂಗಸುಗೂರಿಗೆ ಬಲ್ದೀರ್ ಸಿಂಗ್ (9592871891, 7013249635) ಹಾಗೂ ದೇವದುರ್ಗಕ್ಕೆ ಜೆ.ಸೆಂಥಿಲ್ ಕುಮಾರ್ (995497907) ತಂಡದ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ರಬ್ಬರ್ ಬೋಟ್ಗಳಿಗಾಗಿ ಲಿಂಗುಸುಗೂರಿನ ಯಳಗುಂದಿ ಗ್ರಾಮದ ಪವರ್ ಪ್ಲಾಂಟ್ ಅಗ್ನಿಶಾಮಕ ದಳ ಅಧಿಕಾರಿ ರವೀಂದ್ರ ಘಾಟಕೆ (9740624022, 08532-235999, 101,) ದೇವದುರ್ಗ ಹಾಗೂ ರಾಯಚೂರಿಗೆ ಡಿಎಸ್ಪಿ ಕಾಶಪ್ಪನವರ್ (9480803806), ಅಧಿಕಾರಿ ವಿರುಪಾಕ್ಷಿ (9880461822) ಮತ್ತು ಎಎಸ್ಐ ಬಸವರಾಜ್ (9741285764)ರನ್ನು ಸಂಪರ್ಕಿಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಉಪಯೋಗಿಸಲು 5 ಆಂಬುಲೆನ್ಸ್, ಔಷಧ ಕಿಟ್ ಸಂಗ್ರಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ 23 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ರಾಯಚೂರಲ್ಲಿ 242.8 ಹೆಕ್ಟರ್, ಲಿಂಗಸೂಗೂರಲ್ಲಿ 96.8 ಹೆಕ್ಟರ್ ಮತ್ತು ದೇವದುರ್ಗದಲ್ಲಿ 153 ಹೆಕ್ಟರ್ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 492.6 ಹೆಕ್ಟರ್ ಬೆಳೆಗಳಲ್ಲಿ ನೀರು ಬಂದಿದೆ ಎಂದು ವಿವರಿಸಿದರು.
ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಮಳೆ ಕೊರತೆಯಿತ್ತು. ಮಳೆ ಆರಂಭಗೊಂಡಿರುವುದರಿಂದ ಶೇ 80 ರಷ್ಟು ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಮುಂಗಾರು ಹಂಗಾಮಿನಲ್ಲಿ ಖುಷ್ಕಿಯಲ್ಲಿ 1,74,662 ಹೆಕ್ಟೆರ್ ಗುರಿಯಲ್ಲಿ 1,03,560 ಹೆಕ್ಟೇರ್ ಬಿತ್ತನೆಯಾಗಿದೆ. ನೀರಾವರಿ ವಲಯದಲ್ಲಿ 1,76,039 ಹೆಕ್ಟೆರ್ ಪೈಕಿ 31,733 ಹೆಕ್ಟೆರ್ ಬಿತ್ತನೆಯಾಗಿದೆ. ಒಟ್ಟಾರೆ 3,50,701 ಹೆಕ್ಟೆರ್ ಪೈಕಿ 1,35,293 ಹೆಕ್ಟೆರ್ ಬಿತ್ತನೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡರ, ಯೋಜನಾಧಿಕಾರಿ ಟಿ.ರೋಣಿ, ಉಪ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.