ADVERTISEMENT

ಜಾಗೃತಿ ಕೊರತೆ: ಸಿಗದ ಸ್ಪಂದನೆ

ಕೊರೊನಾ ವಾರಿಯರ್‌ಗಳಿಗೆ ಬೇಸರ: ಇಲಾಖೆ ಜತೆ ಕೈಜೋಡಿಸಲು ಮನವಿ

ಡಿ.ಎಚ್.ಕಂಬಳಿ
Published 18 ಸೆಪ್ಟೆಂಬರ್ 2020, 6:28 IST
Last Updated 18 ಸೆಪ್ಟೆಂಬರ್ 2020, 6:28 IST
ಸಿಂಧನೂರಿನ ಪ್ರಶಾಂತನಗರದ ಕೆಂಚಮ್ಮದೇವಿ ದೇವಸ್ಥಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯೊಬ್ಬರ ಗಂಟಲು ಮತ್ತು ಮೂಗಿನ ದ್ರವ ತೆಗೆಯುತ್ತಿರುವುದು
ಸಿಂಧನೂರಿನ ಪ್ರಶಾಂತನಗರದ ಕೆಂಚಮ್ಮದೇವಿ ದೇವಸ್ಥಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯೊಬ್ಬರ ಗಂಟಲು ಮತ್ತು ಮೂಗಿನ ದ್ರವ ತೆಗೆಯುತ್ತಿರುವುದು   

ಸಿಂಧನೂರು: ಮಾರ್ಚ್ ತಿಂಗಳಿನಿಂದ ಕಾಡುತ್ತಿರುವ ಕೊರೊನಾ ರೋಗದ ಕುರಿತು ಜನರಿಗೆ ಜಾಗೃತಿ ಕೊರತೆ ಇದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರಿಗೂ ಕೋವಿಡ್ ಪರೀಕ್ಷೆ ಮಾಡಿಸಬೇಕು ಎನ್ನುವ ಉದ್ದೇಶದಿಂದ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಚಿಕಿತ್ಸೆ ನೀಡುವ ಟ್ರಯಾಜ್ ತಂಡಕ್ಕೆ ಜನರಿಂದ ಮಾತ್ರ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.

ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ ಟ್ರಯಾಜ್ ತಂಡ ಎರಡು ವಾಹನ ಹಾಗೂ 50ಕ್ಕೂ ಹೆಚ್ಚು ಆರೋಗ್ಯ ರಕ್ಷಣಾ ಕಿಟ್‍ಗಳೊಂದಿಗೆ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಮನೆಗಳಿಗೆ ಭೇಟಿ ನೀಡುತ್ತಿದೆ.

ಸಾರ್ವಜನಿಕರ ‘ನಿಮ್ಮಿಂದಲೇ ನಮಗೆ ಭಯವಾಗುತ್ತಿದೆ’ ಎನ್ನುವ ಮಾತು ಕೊರೊನಾ ವಾರಿಯರ್ಸ್‌ಗೆ ಬೇಸರ ತಂದಿದೆ.

ADVERTISEMENT

ಕೋವಿಡ್ ಪರೀಕ್ಷೆಗೆ ನಾಗರಿಕರು ಮುಂದೆ ಬಾರದಿರುವುದಕ್ಕೆ ರಾಯಚೂರು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆನ್ನುವ ಭೀತಿಯೇ ಮುಖ್ಯ ಕಾರಣ. ರೋಗ ಲಕ್ಷಣ ಕಂಡು ಬಂದವರನ್ನು ಮತ್ತು ಸೋಂಕಿತರನ್ನು ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಈಗ ಪರಿಸ್ಥಿತಿ ಭಿನ್ನವಾಗಿದೆ. ಸೋಂಕಿತರಾಗಿರಲಿ ಅಥವಾ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟ ವ್ಯಕ್ತಿಗಳಾಗಿರಲಿ ತಮ್ಮ, ತಮ್ಮ ಮನೆಗಳಲ್ಲಿಯೇ ಕ್ವಾರೆಂಟೈನ್‌ಗೆ ಒಳಗಾಗಬೇಕು. ಆಸ್ಪತ್ರೆ ಸಿಬ್ಬಂದಿ ಅಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಪರೀಕ್ಷೆಗೆ ಒಳಪಡಲು ಭಯ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜೀವನೇಶ್ವರಯ್ಯ.

ಈಗಾಗಲೇ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 14 ಸಾವಿರ ಜನರನ್ನು ಪರೀಕ್ಷೆ ಮಾಡಲಾಗಿದೆ. 1469 ಜನರಿಗೆ ಸೋಂಕು ದೃಢಪಟ್ಟಿದೆ. 428 ಸಕ್ರಿಯ ಪ್ರಕರಣಗಳಿವೆ. 37 ಜನ ಮೃತಪಟ್ಟಿದ್ದಾರೆ. ಗುಣಮುಖರಾಗುವವರ ಸಂಖ್ಯೆ ಅಧಿಕವಾಗಿದೆ.

ಗರ್ಭಿಣಿಯರು, ಸಕ್ಕರೆ, ಬಿಪಿ ಕಾಯಿಲೆ ಇರುವವರು, ಕಿಡ್ನಿ ವೈಫಲ್ಯ ಮತ್ತಿತರ ಕಾಯಿಲೆ ಇರುವವರು ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದರೆ ರೋಗ ನಿಯಂತ್ರಿಸಬಹುದು. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಆರೋಗ್ಯ ಇಲಾಖೆಗೆ ಕೈಜೋಡಿಸುವ ಅಗತ್ಯವಿದೆ.
ಕಾರಣ ಆಯಾ ವಾರ್ಡ್‌ಗಳ ನಗರಸಭೆ ಸದಸ್ಯರು ಜನರಿಗೆ ಮನವರಿಕೆ ಮಾಡಿ ತಿಳಿ ಹೇಳಿದರೆ ಸಾರ್ವಜನಿಕರಿಂದ ಸ್ಪಂದನೆ ನಿರೀಕ್ಷಿಸಬಹುದಾಗಿದೆ ಎಂದು ವೈದ್ಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.