ADVERTISEMENT

‘ಲಾರ್ವ ಸಮೀಕ್ಷೆಗೆ ಜನರ ಸಹಕಾರ ಅಗತ್ಯ’

ಡೆಂಗಿ ವಿರೋಧಿ ಮಾಸಾಚರಣೆಯ ನಿಮಿತ್ತ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 14:37 IST
Last Updated 5 ಜುಲೈ 2019, 14:37 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಡೆಂಗಿ ವಿರೋಧಿ ಮಾಸಾಚರಣೆಯ ಜಾಥಾಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಡಿ.ಶಾಕೀರ ಚಾಲನೆ ನೀಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಡೆಂಗಿ ವಿರೋಧಿ ಮಾಸಾಚರಣೆಯ ಜಾಥಾಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಡಿ.ಶಾಕೀರ ಚಾಲನೆ ನೀಡಿದರು   

ರಾಯಚೂರು: ಲಾರ್ವ ಸಮೀಕ್ಷೆಗೆ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಡಿ.ಶಾಕೀರ ಹೇಳಿದರು.

ನಗರದ ಎಲ್‌ಬಿಎಸ್‌ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗಿ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಡೆಂಗಿ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶುಕ್ರವಾರ ಕಿರಿಯ ಪುರುಷ ಹಾಗೂ ಮಹಿಳಾ ಆರೋಗ್ಯ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿ ನೀರು ಸಂಗ್ರಹ ಮಾಡಿರುವುದು ಪರಿಶೀಲನೆ ನಡೆಸಲಿದ್ದಾರೆ ಎಂದರು.

ADVERTISEMENT

ಲಾರ್ವಾ ಸಮೀಕ್ಷೆಗೆ ಸಹಕಾರ ನೀಡುವುದರ ಜೊತೆಗೆ ಮನೆಯ ಸುತ್ತಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯದಿಂದ ಇರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ ಮಾತನಾಡಿ, ಇಡೀಸ್ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರ ಹರಡುತ್ತದೆ. ಈ ಸೊಳ್ಳೆಯ ಜೀವಿತಾವಧಿ ಮೂರ್ನಾಲ್ಕು ವಾರವಿದ್ದು, ನಾಲ್ಕೈದು ಬಾರಿ ಮೊಟ್ಟೆ ಇಡಬಲ್ಲದು. ಒಮ್ಮೆ 100–200 ಮೊಟ್ಟೆಗಳಿಡುತ್ತದೆ. ಆಹಾರ ಅವಶ್ಯಕತೆ ಪೂರೈಸಿಕೊಳ್ಳಲು ಒಬ್ಬರಿಗಿಂತ ಹೆಚ್ಚಿನ ಜನರಿಗೆ ಕಚ್ಚುತ್ತದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ರೋಗ ನಿಯಂತ್ರಣಕ್ಕಾಗಿ ನೀರಿನ ಸಂಗ್ರಹಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಒಣಗಿಸಿದ ನಂತರವೇ ನೀರು ತುಂಬಿಸಬೇಕು. ಸೊಳ್ಳೆಗಳು ನುಸುಳದಂತೆ ಮುಚ್ಚಬೇಕು. ಬಯಲಿನಲ್ಲಿ ಟೈಯರ್, ಎಳೆನೀರಿನ ಚಿಪ್ಪು ಹಾಗೂ ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ನಿಗಾವಹಿಸಬೇಕು. ಸೊಳ್ಳೆ ನಿರೋಧಕ ಪರದೆ ಬಳಸಬೇಕು. ಜ್ವರ ಬಂದಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.

ತಾಲ್ಲೂಕು ಮೇಲ್ವಿಚಾರಕ ರಂಗರಾವ್ ಕುಲಕರ್ಣಿ ಐಕೂರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.