ರಾಯಚೂರು: ವಕೀಲ ಪಿ.ಎಸ್.ವೀರಯ್ಯ ಮೇಲೆ ಹಲ್ಲೆ ಮಾಡಿರುವ ಪಶ್ವಿಮ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ ಮೇಕಾ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಊಟ ಪಾರ್ಸೆಲ್ ತೆಗೆದುಕೊಂಡು ಹೋಗಲು ಸ್ಟೇಷನ್ ಸರ್ಕಲ್ನಲ್ಲಿದ್ದ ಅಂಗವಿಕಲ ವಕೀಲನ ಮೇಲೆ ಪಿಎಸ್ಐ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.
ಏಪ್ರಿಲ್ 22ರಂದು ರಾತ್ರಿ 10ಗಂಟೆಗೆ ಪೊಲೀಸ್ ಜೀಪ್ ಚಾಲಕನ ಜೊತೆ ಮಾತನಾಡುತ್ತಿದ್ದ ವಕೀಲನ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಂಗವಿಕಲನಾಗಿದ್ದು, ಊಟ ತೆಗೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದ ವಕೀಲ ವಿನಾಕಾರಣ ಹಲ್ಲೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ವಕೀಲನನ್ನು ಠಾಣೆಗೆ ಕರೆದುಕೊಂಡು ಹೋಗಿ ಬಟ್ಟೆಗಳನ್ನು ಕಳಚಿ ಕೈಗೆ ಕೊಳಹಾಕಿದ್ದಾರೆ. ಬ್ಯಾಟರಿಯಿಂದ ಶಾಕ್ ನೀಡಿ ಹಿಂಸೆ ನೀಡಿದ್ದಾರೆ ಎಂದು ದೂರಿದರು.
ವಕೀಲರ ಮೇಲೆ ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮ ತೆಗೆದುಕೊಳ್ಳಬೇಕು. ಪಿಎಸ್ಐ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರ ಗಮನಕ್ಕೆ ತರಲಾಗಿದೆ. ಸಚಿವರ ತಪ್ಪಿತಸ್ಥ ಪಿಎಸ್ಐ ವಿರುದ್ಧ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಭಾನುರಾಜ, ಪ್ರಧಾನ ಕಾರ್ಯದರ್ಶಿ ಶ್ರೀಧರ ಯಲಿ, ಉಪಾಧ್ಯಕ್ಷ ಪಿ.ಬಸವರಾಜ, ಜಂಟಿ ಕಾರ್ಯದರ್ಶಿ ನಜೀರ ಅಹಮ್ಮದ್,ಖಜಾಂಚಿ ಎಸ್.ರಾಮು, ಹಿರಿಯ ವಕೀಲರಾದ ತಾರೀಖ ರಿಜ್ವಿ, ಜೈ ನಿಲಕಂಠ, ವೀರೇಶ ಸ್ವಾಮಿ,ಇಟಗಿ ವಿಶ್ವನಾಥ, ಸಂಘದ ಸದಸ್ಯರಾದ ಕೆ.ಸಿ ವೀರೇಶ, ಪ್ರಹ್ಲಾದ್ ಕಲ್ಮಲಾ, ವೀರೇಶಗೌಡ, ಬಸಮ್ಮ, ಮಲ್ಲಿನಾಥ ಹಿರೇಮಠ,ರಾಘವೇಂದ್ರ ನಾಯಕ, ಕೊಪ್ಪರ ಬಸನಗೌಡ, ವೀರೇಶ ಸಜ್ಜನ್, ಅಂಬಾಪತಿ ಪಾಟೀಲ್, ಜಿ.ಎಸ್ ವೀರಭದ್ರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.