ರಾಯಚೂರು: ರಾಜ್ಯ ಸರ್ಕಾರವು ಘೋಷಿಸಿರುವ ರಾಯಚೂರು ವಿಶ್ವವಿದ್ಯಾಲಯವನ್ನು ಕೂಡಲೇ ಆರಂಭಿಸುವುದಕ್ಕೆ ಒತ್ತಾಯಿಸಿ ನಗರದ ಅರಬ್ ಮೊಹಲ್ಲಾದಲ್ಲಿರುವ ಸೇವಾ ಸಂಸ್ಥೆಯ ಸೇವಾ ಸಮಾಜ ಕಾರ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಪತ್ರ ಚಳವಳಿ ಮಾಡಿ ರಾಜ್ಯಪಾಲರಿಗೆ ಅವುಗಳನ್ನು ರವಾನಿಸಿದರು.
ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ರಜಾಕ ಉಸ್ತಾದ ಮಾತನಾಡಿ, ರಾಜ್ಯಪಾಲರು ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ– 2017 ಕ್ಕೆ ಅಂಕಿತ ಹಾಕದ ಕಾರಣಕ್ಕೆ ಹೊಸ ವಿಶ್ವವಿದ್ಯಾಲಯ ಕಾರ್ಯಾರಂಭಗೊಳ್ಳುತ್ತಿಲ್ಲ. ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ, ಮೂಲ ಸೌಲಭ್ಯ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಸಹಿಸುವುದಿಲ್ಲ ಎಂದರು.
ಹೊಸ ವಿಶ್ವವಿದ್ಯಾಲಯ ಸಂಪೂರ್ಣ ಅನುಷ್ಠಾನಕ್ಕಾಗಿ ವಿವಿಧ ರೀತಿಯಲ್ಲಿ ಹೋರಾಟಗಳನ್ನು ನಡೆಸಲು ತೀರ್ಮಾನಿಸಿದ್ದು ಅದರ ಭಾಗವಾಗಿಯೇ ಪತ್ರಚಳವಳಿ ಮಾಡಲಾಗುತ್ತಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕಾಲೇಜಿನ ಪ್ರಾಚಾರ್ಯ ಶರಣಬಸವ ಪಾಟೀಲ, ಹೋರಾಟಗಾರರಾದ ಹಫೀಜುಲ್ಲಾ, ಪಿ.ಬಸವರಾಜ, ಈರಣ್ಣ ಬೆಂಗಾಲಿ, ಎಂ.ಜಿ.ಮಾಲಾ, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.