ರಾಯಚೂರು:ಕೇಂದ್ರ ಹಣಕಾಸು ಸಚಿವರು ಜೀವ ವಿಮಾ ನಿಗಮ (ಎಲ್ಐಸಿ)ದ ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಪ್ರಸ್ತಾವನೆ ಮಾಡಿರುವುದನ್ನು ವಿರೋಧಿಸಿ ಜೀವ ವಿಮಾ ನಿಗಮದ ನೌಕರರು ನಗರದ ವಿಭಾಗೀಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಲ್ಐಸಿಯ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವ ಮತ್ತು ಸಂಸ್ಥೆಯ ಭಾಗಶಃ ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಸಚಿವರು ಉಲ್ಲೇಖಿಸಿದ್ದಾರೆ. ಪ್ರಸ್ತುತ ಎಲ್ಐಸಿ ಶೇ 100 ರಷ್ಟು ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಲಸಿದಾರರ ಮೂಲಕ ಸಂಗ್ರಹಿಸುವ ಸಣ್ಣ ಉಳಿತಾಯವು ದೊಡ್ಡ ಮೊತ್ತವಾಗಿದ್ದು, ದೇಶದ ಅಭಿವೃದ್ಧಿಗೆ ನೆರವಾಗುತ್ತಿದೆ. 68 ವರ್ಷಗಳಿಂದ ದೇಶದ ಅಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ ಎಂದು ಪ್ರತಿಭಟನಾಕಾರರು ಉಲ್ಲೇಖಿಸಿ ಮಾತನಾಡಿದರು.
ಪಂಚವಾರ್ಷಿಕ ಯೋಜನೆಗಳ ಜಾರಿಯಲ್ಲಿ ಎಲ್ಐಸಿ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೆರವು ಒದಗಿಸುತ್ತಾ ಬಂದಿದೆ. ದೇಶದ ಜಿಡಿಪಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಐಸಿ ಬೆಳವಣಿಗೆ ಆಗುತ್ತಿದೆ. ಕಳೆದ ಆರು ತಿಂಗಳಲ್ಲಿ ಎಲ್ಐಸಿ ಸಾಧಿಸಿರುವ ಪ್ರಗತಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಸರ್ಕಾರವನ್ನು ಉತ್ತಮಗೊಳಿಸುವುದಕ್ಕೆ ಸಾಧ್ಯವಾಗಿದೆ ಎಂದರು.
ವಿಮಾ ಉದ್ಯಮದಲ್ಲಿ ಶೇ 73 ರಷ್ಟು ಪಾಲುದಾರಿಕೆ ಹೊಂದಿರುವ ಹಾಗೂ ಗಮಾನಾರ್ಹ ಸಾಧನೆ ಮಾಡುತ್ತಿರುವ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಪಾಲುದಾರರಿಗೆ ಕೊಡುತ್ತಿರುವುದು ಸರಿಯಲ್ಲ. ಸಾರ್ವಜನಿಕರ ವಿಶ್ವಾಸದಿಂದ ಬೆಳೆದು ಬಂದಿರುವ ಸಂಸ್ಥೆಯನ್ನು ಖಾಸಗೀಕರಣ ಮಾಡುವುದರಿಂದ ಆಗುವ ಪರಿಣಾಮವನ್ನು ನೋಡಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಸರ್ಕಾರದ ಬಂಡವಾಳ ₹100 ಕೋಟಿ ಇತ್ತು. ಇಲ್ಲಿಯವರೆಗೆ ₹2,611 ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಿದೆ. ಕೇಂದ್ರ ಸರ್ಕಾರವು ಮಂಡಿಸುವ ಬಜೆಟ್ ಅನುಷ್ಠಾನಕ್ಕೆ ಎಲ್ಐಸಿಯಿಂದ ಶೇ 25 ರಷ್ಟು ಅನುದಾನ ಪಡೆದುಕೊಳ್ಳುತ್ತಾ ಬಂದಿದೆ. ವಿಶ್ವಾಸದಿಂದ ಮುಂದೆ ಸಾಗುತ್ತಿರುವ ಸರ್ಕಾರಿ ಸಂಸ್ಥೆಯಿಂದ ಬಂಡವಾಳ ಹಿಂತೆಗೆದ ಮಾಡುವ ಕ್ರಮದಿಂದ ಕೈಬಿಡಬೇಕು. ಬಜೆಟ್ನಲ್ಲಿ ಘೋಷಿಸಿರುವ ಪ್ರಸ್ತಾವನೆಯಲ್ಲಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಎಲ್ಐಸಿ ನೌಕರರ ಸಂಘದ ಎಂ.ರವಿ, ಗುರುರಾಜ, ಸೀತಾರಾಮ ಕಟ್ಟಿಮನಿ, ಎಂ.ಶರಣಗೌಡ, ಶ್ರೀಧರ, ಜಿ.ಲತಾಮ ಉಷಾ ಅವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.