ರಾಯಚೂರು: ಕಳಪೆ ಮಟ್ಟದ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ವಸತಿ ನಿಲಯದಲ್ಲಿಬುಧವಾರ ವಿದ್ಯಾರ್ಥಿಗಳು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಹುಳು ಮಿಶ್ರಿತ ಆಹಾರ ನೀಡುತ್ತಿದ್ದಾರೆ. ಇಂತಹ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಮೇಲ್ವಿಚಾರಕರಿಗೆ ತಿಳಿಸಬೇಕೆಂದರೆ ಅವರು ತಿಂಗಳಿಗೊಮ್ಮೆ ಬರುತ್ತಾರೆ. ಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿ ಜಿಮ್ ಸಾಮಗ್ರಿಗಳು ಇದ್ದರೂ, ಇಲ್ಲದಂತಾಗಿದೆ. ವ್ಯವಸ್ಥಿತ ಗ್ರಂಥಾಲಯ ಸೌಲಭ್ಯವು ಇಲ್ಲ. ಶೌಚಾಲಯಗಳು ಶುಚಿತ್ವದಿಂದ ಕೂಡಿಲ್ಲ ಈ ಕುರಿತು ಮೇಲ್ವಿಚಾರಕ ಹನುಮಂತರಾಯ ಇವರಿಗೆ ಮನವರಿಕೆ ಮಾಡಿದರೂ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ಕೂಡಲೇ ವಸತಿ ನಿಲಯಕ್ಕೆ ಅಗತ್ಯ ಸೌಲಭ್ಯಗಳು ಒದಗಿಸುವಂತೆ ಒತ್ತಾಯಿಸಿದರು.
ವಿದ್ಯಾರ್ಥಿಗಳಾದ ರಾಮಲಿಂಗ, ಕರುಣಾಕರ, ಲೋಕೇಶ, ಪಾಲರಾಜ, ರಾಜು, ದೇವರಾಜ, ಶಿವರಾಜ, ಹನುಮೇಶ, ಸಂಜೀವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.