ರಾಯಚೂರು: ಜಿಲ್ಲೆಯಲ್ಲಿ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಆಯುಧಪೂಜಾ ಮುನ್ನಾದಿನ ಬುಧವಾರ ಜನರು ವಿವಿಧ ಪೂಜಾ ಸಾಮಗ್ರಿಗಳನ್ನು ಖರೀದಿಯಲ್ಲಿ ತೊಡಗಿರುವುದು ಮಾರುಕಟ್ಟೆಯಲ್ಲಿ ಗಮನ ಸೆಳೆಯಿತು.
ಪ್ರತಿವರ್ಷದಂತೆ ವಹಿವಾಟು ಜೋರಾಗಿ ಇರಲಿಲ್ಲ. ಆದರೆ ಸಂಪ್ರದಾಯ ಪಾಲನೆಗೆ ಪ್ರಾಮುಖ್ಯತೆ ನೀಡುವವರ ಮಾರುಕಟ್ಟೆಯಲ್ಲಿ ನೆರೆದಿದ್ದರು. ಸರಾಫ್ ಬಜಾರ್ ಮಾರ್ಗ, ಭಂಗಿಕುಂಟಾ ರಸ್ತೆ, ಚಂಧ್ರಮೌಳೇಶ್ವರ ವೃತ್ತ, ಗಂಜ್ ರಸ್ತೆ, ಮಹಾವೀರ ವೃತ್ತ, ತೀನ್ ಕಂದಿಲ್ ಹಾಗೂ ಉಸ್ಮಾನಿಯಾ ಮಾರುಕಟ್ಟೆ ಎದುರಿನ ರಸ್ತೆಗಳಲ್ಲಿ ಹೂವು, ಹಣ್ಣುಗಳನ್ನು ಮಾರಾಟ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮಹಾನವಮಿಗೆ ಹೊಸ ವಾಹನಗಳ ಖರೀದಿ ಹಾಗೂ ಅಂಗಡಿ ಪೂಜೆ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಅಲ್ಲದೆ, ಮನೆಯಲ್ಲಿರುವ ಲೋಹದ ಆಯುಧಗಳನ್ನೆಲ್ಲ ಆಯುಧ ಪೂಜಾ ದಿನದಂದು ಪೂಜಿಸಲಾಗುತ್ತದೆ. ಹೀಗಾಗಿ ಮಾವಿನ ತೋರಣ, ಈಡು ಕುಂಬಳಕಾಯಿ, ಕಬ್ಬು, ಬಾಳೆಗಿಡ, ಹಣ್ಣುಗಳ ಮಾರಾಟ ಮಾತ್ರ ನಡೆಯಿತು.
ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲದ ಕಾರಣ, ಹೂವು, ಹಣ್ಣುಗಳ ದರವು ಸಾಮಾನ್ಯವಾಗಿತ್ತು. ಸೇವಂತಿ ಒಂದು ಕೆಜಿಗೆ ₹100, ಮಲ್ಲಿಗೆ ಒಂದು ಮೊಳಕ್ಕೆ ₹30 ಹಾಗೂ ಕನಕಾಂಬರ ಒಂದು ಮೊಳಕ್ಕೆ ₹20 ರ ದರದಲ್ಲಿ ಮಾರಾಟವಾಯಿತು. ಒಂದು ಜೊತೆ ಬಾಳೆಗಿಡ ₹30 ದರ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.