
ಸಿಂಧನೂರು: ಕವಿತೆ, ಕಥೆ, ಕಾದಂಬರಿ ಹೀಗೆ ಯಾವುದೇ ಸಾಹಿತ್ಯವಾಗಿರಲಿ ಜನಪರವಾಗಿರಬೇಕು ಎಂದು ಗಜಲ್ ಕವಿ ಡಾ.ಶರೀಫ್ ಹಸಮಕಲ್ ಅಭಿಪ್ರಾಯಪಟ್ಟರು.
ನಗರದ ಎಲ್ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಮಲ್ಲಿಕಾರ್ಜುನ ಕಮತಗಿ ಅವರ ಕೃತಿ ‘ಜವಾರಿ ಜರ್ನಿ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಒಬ್ಬ ತಾಯಿ ಮಗುವನ್ನು ಪೋಷಿಸುವುದು ಲೋಕದ ರೂಢಿ, ಆದರೆ ಮಗುವೇ ತಾಯಿಯನ್ನು ಪೋಷಿಸುವ ಜವಾಬ್ದಾರಿ ಹಿಂದಿರುವ ಹಸಿವಿನ ಸಂವೇದನೆಯನ್ನು ಕವಿ ಮಾನವೀಯತೆ ನೆಲೆಯಲ್ಲಿ ಚಿತ್ರಿಸಿದ್ದಾರೆ. ಇಲ್ಲಿರುವ 21 ಅನುಭವ ಕಥನಗಳಲ್ಲಿ ಬದುಕಿನ ಹತಾಸೆ, ನೋವು, ನಲಿವು, ಹಾಸ್ಯ, ಕಾರುಣ್ಯ ಎಲ್ಲವನ್ನೂ ಒಂದು ದಲಿತ ಪ್ರಬಂಧವೂ ಹೌದು ಎಂದು ಓದುಗರು ಅಪ್ಪಿಕೊಳ್ಳುತ್ತಾರೆ’ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಸಿ.ಬಿ ಚಿಲ್ಕರಾಗಿ ಉದ್ಘಾಟಿಸಿದರು. ಜವಾರಿ ಜರ್ನಿ ಕೃತಿಯನ್ನು ಡಾ.ಸಿದ್ದಯ್ಯ ಪುರಾಣಿ ಟ್ರಸ್ಟಿನ ಅಧ್ಯಕ್ಷರು ಮತ್ತು ಪಠ್ಯಪುಸ್ತಕ ಸಂಸ್ಥೆಯ ರಚನಾ ಸಭೆಯ ಸದಸ್ಯರು ಆದ ಅಜ್ಮೀರ್ ನಂದಾಪುರ ಕೃತಿ ಲೋಕಾರ್ಪಣೆ ನೆರವೇರಿಸಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹುಸೇನಪ್ಪ ಅಮರಾಪುರ ಮಾತನಾಡಿದರು.
ಲೇಖಕರ ತಂದೆ ಹೊಳೆಯಪ್ಪ ಕಮತಗಿ, ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಜಾಲಹಳ್ಳಿಯ ಕೋಲಕಾರ ಫ್ಯಾಮಿಲಿ ಟ್ರಸ್ಟ್ ಪ್ರಕಾಶಕ, ರಾಘವೇಂದ್ರ ಕೋಲಕಾರ ಉಪಸ್ಥಿತರಿದ್ದರು. ಉಪನ್ಯಾಸಕ ಈಶ್ವರ ಹಲಗಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.