
ಮಾನ್ವಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಕ್ಕುಗಳನ್ನು ಕಸಿದು ಬೃಹತ್ ಕಂಪನಿಗಳಿಗೆ ಅನುಕೂಲ ಮಾಡಿ ಕೊಡಲು ಮುಂದಾಗಿರುವುದು ಸರಿಯಲ್ಲ. ಇಂತಹ ಧೋರಣೆಗಳ ವಿರುದ್ಧ ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಹೇಳಿದರು.
ಶನಿವಾರ ಪಟ್ಟಣದ ನ್ಯೂ ಫ್ರೆಂಡ್ಸ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಯಚೂರು ಜಿಲ್ಲಾ ಮಟ್ಟದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಯ ಎಂಟನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು
‘ದೇಶದ ದುಡಿಯುವ ಕೈಗಳಿಗೆ ಉದ್ಯೋಗ, ದುಡಿಮೆಗೆ ತಕ್ಕ ವೇತನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಪರ ಕೆಲಸ ಮಾಡುತ್ತಿವೆ. ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ ಐಸಿಡಿಎಸ್ೋ ಜನೆಯ ಖಾಸಗೀಕರಣಗೊಳಿಸುವ ಮೂಲಕ ಹಾಗೂ ಬಿಸಿಯೂಟವನ್ನು ಇಸ್ಕಾನ್ ಸಂಸ್ಥೆಗೆ ನೀಡುವ ಮೂಲಕ ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ ನೌಕರರ ಉದ್ಯೋಗ ಕಸಿಯಲಾಗುತ್ತಿದೆ. ದೇಶದಲ್ಲಿನ ಸರ್ಕಾರಿ ಉದ್ದಿಮೆಗಳನ್ನು ಹಾಗೂ ಸರ್ಕಾರಿ ಒಡೆತನದ 14 ಲಕ್ಷಕ್ಕೂ ಹೆಚ್ಚು ಕಾರ್ಖನೆಗಳನ್ನು, ಸಂಸ್ಥೆಗಳನ್ನು ಲಾಕ್ ಔಟ್ ಮಾಡುವುದಕ್ಕೆ ಮುಂದಾಗುತ್ತಿವೆ’ ಎಂದು ಅವರು ದೂರಿದರು.
ಕಾರ್ಮಿಕರಿಗೆ ಮಾಸಿಕ ₹36 ಸಾವಿರ ಕನಿಷ್ಟ ವೇತನಕ್ಕಾಗಿ ಹೋರಾಟ ನಡೆಸುವ ಕುರಿತು, ನ.13.14,15 ರಂದು ಹಾಸನದಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ವಿಶಾಖಪಟ್ಟಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸಮೇಳನ ಹಾಗೂ ರಾಯಚೂರು ಜಿಲ್ಲೆಯಲ್ಲಿ ಮುಂದಿನ ಮೂರು ವರ್ಷಗಳ ಕಾಲ ಕೈಗೊಳ್ಳಬೇಕಾದ ಕಾರ್ಯ ಯೋಜನೆ ಕುರಿತು ಚರ್ಚೆ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷೆ ಎಚ್. ಪದ್ಮಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಸಿಐಟಿಯು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ. ಜಿ.ವೀರೇಶ್, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಶಬೀರ್, ಜಿಲ್ಲಾ ಅಧ್ಯಕ್ಷ ರುದ್ರಪ್ಪ ನಾಯಕ, ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಮನಸಲಾಪುರ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಗಿರಿಯಪ್ಪ, ಹನೀಫ್, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.