ಮಸ್ಕಿ: ‘ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅವರ ದೈಹಿಕ ಬೆಳವಣಿಗೆ ವೃದ್ಧಿಯಾಗುತ್ತದೆ‘ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಮ್ಯಾರಥಾನ್ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಉತ್ತಮ ಆರೋಗ್ಯ ಅವಶ್ಯವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು‘ ಎಂದರು.
ಪಟ್ಟಣದಲ್ಲಿ ಮೊದಲ ಬಾರಿಗೆ ತಾಲ್ಲೂಕು ಮಟ್ಟದ ಮ್ಯಾರಥಾನ್ ಓಟದ ಸ್ಪರ್ಧೆ ಏರ್ಪಡಿಸುವ ಇಲ್ಲಿಯ ಸಂಸ್ಥೆಗಳು ಉತ್ತಮ ಕೆಲಸ ಮಾಡಿವೆ. ಪ್ರತಿ ಗ್ರಾಮ ಹಾಗೂ ಪಟ್ಟಣದಲ್ಲಿ ಇಂತಹ ಕ್ರೀಡೆಗಳನ್ನು ಏರ್ಪಡಿಸುವ ಮೂಲಕ ಯುವ ಜನಾಂಗವನ್ನು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕೆಲಸ ನಡೆಯಬೇಕು ಎಂದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಡಾ.ಶಿವಶರಣಪ್ಪ ಇತ್ಲಿ. ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ಧಲಿಂಗಯ್ಯ ಸೊಪ್ಪಿಮಠ, ಡಾ. ಮಲ್ಲಿಕಾರ್ಜುನ ಇತ್ಲಿ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್, ಅಭಿನಂದನ್ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿ, ಗಾಂಧಿ ಕುಟೀರದ ಶಿವಪ್ರಸಾದ, ಡಾ.ಮೌನೇಶ, ಶಿಕ್ಷಕ ದೊಡ್ಡಯ್ಯ ಸರಗಣಚಾರಿ ಸೇರಿದಂತೆ ಇತರರು ಇತರರು ಇದ್ದರು.
ಬೆಳಿಗ್ಗೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಿಂದ ಮ್ಯಾರಥಾನ್ ಓಟ ಆರಂಭವಾಯಿತು. ಗಾಂಧಿ ನಗರ, ಅಶೋಕ ವೃತ್ತದ ಮೂಲಕ ಸಾಗಿ ಗಚ್ಚಿನಮಠದ ಆವರಣಕ್ಕೆ ಆಗಮಿಸಿತು. 50ಕ್ಕೂ ಹೆಚ್ಚು ಯುವಕರು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಪ್ರಥಮ, ತೃತೀಯ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.