ಮಸ್ಕಿ: ರಾಷ್ಟ್ರೀಯ ಹೆದ್ದಾರಿ 748 (ಎ) ತಾಲ್ಲೂಕಿನಲ್ಲಿ ಹಾದು ಹೋಗುತ್ತಿದ್ದು ಇದರಿಂದ ರೈತರು ಜಮೀನಿಗೆ ತೆರಳು ದಾರಿ ಇಲ್ಲದೇ ಕೃಷಿ ಚುಟುವಟಿಕೆಗಳಿಗೆ ಅಡ್ಡಿಯಾಗುತ್ತಿರುವುದನ್ನು ಖಂಡಿಸಿ ಗೋನ್ವಾರ, ಮಿಟ್ಟಿಕೆಲ್ಲೂರು, ಸಂತೆಕೆಲ್ಲೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಅಶೋಕ ವೃತ್ತದಿಂದ ಆರಂಭವಾದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಹಳೆಯ ಬಸ್ ನಿಲ್ದಾಣದ ಬಳಿ ರೈತರು ಧರಣಿ ನಡೆಸಿದರು.
ರೈತರ ಜಮೀನುಗಳಿಗೆ ಕಾನೂನು ಸಮ್ಮತವಾಗಿರುವ ದಾರಿಗಳನ್ನು ಮುಚ್ಚಿ ಎಲ್ಲೋ ಒಂದು ಕಡೆ ಚಿಕ್ಕದಾಗಿ ಆಂಡರ್ಪಾಸ್ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ನಮ್ಮ ಜಮೀನಿನ ಕೃಷಿ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ, ಟ್ರಾಕ್ಟರ್ ಮತ್ತು ಕಟಾವು ಮಾಡುವು ಯಂತ್ರಗಳು ಜಮೀನುಗಳಿಗೆ ಬರಲು ತೊಂದರೆಯಾಗುತ್ತದೆ ಎಂದು ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ
ಹೆದ್ದಾರಿ ಹಾದು ಹೋಗುವ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಮಿಸಬೇಕು. ಅದಕ್ಕೆ ಪ್ರತಿ ಗ್ರಾಮದಲ್ಲಿ ತಮ್ಮ ಸಮ್ಮುಖದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸೇರಿಸಿಕೊಂಡು, ರೈತರ ಜೊತೆ ಸಭೆ ಮಾಡಿ ಜಮೀನುಗಳಿಗೆ ಹೋಗುವ ರಸ್ತೆಯ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಮಂಜುನಾಥ ಬೋಗಾವತಿ ಮನವಿ ಸ್ವೀಕರಿಸಿದರು.
ಕುಣಿಕೆಲ್ಲೂರು, ಗೋನವಾರ, ಸರ್ಜಾಪುರ, ಸಂತೆಕೆಲ್ಲೂರು, ಮುಸ್ಲಿಕಾರಲಕುಂಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.