ADVERTISEMENT

ಪರಿಶಿಷ್ಟ ಜಾತಿಯವರ ಮನೆಯಲ್ಲಿ ಸಿ.ಎಂ ಉಪಾಹಾರ

ಕಾಂಗ್ರೆಸ್‌ನವರು ಕೈಲಾಗದವರು: ಯಡಿಯೂರಪ್ಪ ಕಿಡಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 2:15 IST
Last Updated 10 ಏಪ್ರಿಲ್ 2021, 2:15 IST
ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕಾಗಿ ಮಸ್ಕಿಗೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಅಂಬೇಡ್ಕರ್‌ ನಗರದ ಪರಿಶಿಷ್ಟ ಜಾತಿಯ ಖಾಸಿಂ ಮುರಾರಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು
ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕಾಗಿ ಮಸ್ಕಿಗೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಅಂಬೇಡ್ಕರ್‌ ನಗರದ ಪರಿಶಿಷ್ಟ ಜಾತಿಯ ಖಾಸಿಂ ಮುರಾರಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು   

ಮಸ್ಕಿ (ರಾಯಚೂರು ಜಿಲ್ಲೆ): ಇಲ್ಲಿಯ ಅಂಬೇಡ್ಕರ್‌ ನಗರದ ಪರಿಶಿಷ್ಟ ಜಾತಿಯ (ಎಡಗೈ) ಖಾಸಿಂ ಮುರಾರಿ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಉಪಾಹಾರ ಸೇವಿಸಿದರು.

ನೀರಾವರಿ ಇಲಾಖೆಯಲ್ಲಿ ದಿನಗೂಲಿಯಾಗಿರುವ ಖಾಸಿಂ ಅವರದ್ದು ಚಿಕ್ಕ ಮನೆ. ಅಲ್ಲಿಯೇ ಮುಖ್ಯಮಂತ್ರಿ ಅವರಿಗೆ ಮಂಡಕ್ಕಿ ಚುಡಾ, ಅವಲಕ್ಕಿ, ಉಪ್ಪಿಟ್ಟು, ಶಿರಾ ಹಾಗೂ ಚಹಾ ವ್ಯವಸ್ಥೆ ಮಾಡಿದ್ದರು. ಚುಡಾ ಮತ್ತು ಉಪ್ಪಿಟ್ಟನ್ನು ನಾಲ್ಕು ತುತ್ತು ತಿಂದ ಸಿ.ಎಂ, ಚಹಾ ಸೇವಿಸಿದರು. ಮಿನರಲ್‌ ನೀರು ಕುಡಿದರು. ಕುಟುಂಬದ ಸದಸ್ಯರ ಕುಶಲೋಪರಿ ವಿಚಾರಿಸಿ ಹೊರಬಂದರು.

ಕಾಂಗ್ರೆಸ್‌ನವರು ಕೈಲಾಗದವರು: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ,‘ಕಾಂಗ್ರೆಸ್‌ನವರು‌ ಕೈಲಾಗದವರು, ಬರೀ ಆರೋಪಗಳನ್ನು ಮಾಡುತ್ತಾ ಮೈ ಪರಚಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲರ ವಿರೋಧಿ ಅಲೆ ಇದೆ ಎಂಬುದು ಸುಳ್ಳು. ನಾವು ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ’ ಎಂದರು.

‘ಕಾಂಗ್ರೆಸ್‌ನವರು ಏನೇ ಮಾಡಿದರೂ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ.5ಎ ಉಪ ಕಾಲುವೆ ನಿರ್ಮಾಣದ ಬಗ್ಗೆ ತಜ್ಞರ ಸಭೆ ಕರೆದು ಚರ್ಚೆಸುತ್ತೇನೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ.ಉಪ ಕಾಲುವೆ ನಿರ್ಮಾಣದ ಬಗ್ಗೆ ತುರ್ತಾಗಿ ಭರವಸೆ ಕೊಡುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಪರಣ್ಣ ಮುನ್ನೊಳ್ಳಿ, ಬಸವರಾಜ ಧಡೆಸೂಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.