ADVERTISEMENT

ಸೋಲಿನ ಭಯದಿಂದ ಹಣ ಹಂಚಿಕೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:07 IST
Last Updated 11 ಏಪ್ರಿಲ್ 2021, 13:07 IST

ಮುದಗಲ್ (ರಾಯಚೂರು): ‘ಬಿಜೆಪಿ ಅಭ್ಯರ್ಥಿ ಸೋಲಿನ ಭಯದಿಂದ ಆ ಪಕ್ಷದವರು ಮಸ್ಕಿ ವಿಧಾನಸಭಾ ಕ್ಷೇತ್ರದ ತುಂಬಾ ಮನೆ ಮನೆಗೆ ತೆರಳಿಜನರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ‘ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಪಟ್ಟಣದ ಶಾಸಕ ಡಿ.ಎಸ್.ಹೂಲಗೇರಿ ಅವರ ನಿವಾಸಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿ ಸರ್ಕಾರದ ಜನ ವಿರೋಧಿ ಆಡಳಿತ ನೀತಿ ವಿರುದ್ಧ ಮತ ಚಲಾಯಿಸುತ್ತಾರೆ. ಮಂತ್ರಿಗಳು ಹಣ ತಂದು ಕ್ಷೇತ್ರದಲ್ಲಿ ಕುಳಿತಿದ್ದಾರೆ. ಜನರಿಗೆ ಹಂಚಲು ಮುಂದಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧ ಆಡಳಿತ ಮಾಡುತ್ತಿದ್ದಾರೆ. ಮಂತ್ರಿಗಳು ತಂದಿರುವುದು ಭ್ರಷ್ಟಾಚಾರದ ಹಣ. ಮತದಾರರು ಹಣ ಪಡೆದರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ‘ ಎಂದರು.

‘ಹಣ ಹಂಚುವ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. ಅವರು ಸುಲಭವಾಗಿ ಗೆಲ್ಲುತ್ತಿದ್ದರೆ, ಎಲ್ಲಾ ಮಂತ್ರಿಗಳು ಈ ಕ್ಷೇತ್ರದಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದರು. ಸೋಲಿನ ಆತಂಕ ಅವರಿಗೆ ಕಾಡುತ್ತಿದೆ. ಮಸ್ಕಿ ಕ್ಷೇತ್ರದ ಜನ ಬುದ್ಧಿವಂತರು. ಭ್ರಷ್ಟ ಸರ್ಕಾರಕ್ಕೆ ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ. ಯಡಿಯೂರಪ್ಪ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸಾರಿಗೆ ನೌಕರರ ಸಮಸ್ಯೆ ಪರಿಹಾರ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೊರೊನಾ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಮಾಡಿರುವುದು ಅವೈಜ್ಞಾನಿಕವಾಗಿದೆ‘ ಎಂದರು.

ADVERTISEMENT

ಇದೆ ವೇಳೆ ಸಿದ್ದರಾಮಯ್ಯ ಅವರನ್ನು ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಸನ್ಮಾನಿಸಿದರು.

ಮಸ್ಕಿ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರು, ಕಂಪ್ಲಿ ಶಾಸಕ ಗಣೇಶ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ವಸಂತಕುಮಾರ, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಯುವ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.