ADVERTISEMENT

ರಾಯಚೂರು | ಸಾಮೂಹಿಕ ವಿವಾಹ ಬಡವರಿಗೆ ವರ; ಸಿದ್ದರಮಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:38 IST
Last Updated 10 ಮೇ 2022, 4:38 IST
ಸಿಂಧನೂರು ತಾಲ್ಲೂಕಿನ ರೌಡಕುಂದಾ ಗ್ರಾಮದಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹ
ಸಿಂಧನೂರು ತಾಲ್ಲೂಕಿನ ರೌಡಕುಂದಾ ಗ್ರಾಮದಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹ   

ಸಿಂಧನೂರು:ಸಾಮೂಹಿಕ ವಿವಾಹ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಬಡವರ ಪಾಲಿಗೆ ವರದಾನವಾಗಿವೆ ಎಂದು ತಿಂಥಿಣಿ ಕಾಗಿನೆಲೆ ಕನಕಗುರುಪೀಠ ಸಿದ್ದರಮಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ರೌಡಕುಂದಾ ಗ್ರಾಮದಲ್ಲಿ ಸೋಮವಾರ ನಡೆದ ಗುರು ಬೀರಲಿಂಗೇಶ್ವರ ಹಾಗೂ ಹೊಸಗೇರೇಶ್ವರ ದೇವರ ಅಗ್ಗಿ ಹರಿಯುವ ಮತ್ತು 21 ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಸಿರಿವಂತರು ಬಡವರಿಗೆ ನೆರವಾಗಿ ಧಾವಿಸಿದಾಗ ಜೀವನ ಸಾರ್ಥಕವಾಗುತ್ತೆ. ತಂದೆ-ತಾಯಿ, ಗುರು ಹಾಗೂ ಸಮಾಜದ ಋಣ ತೀರಿಸಿದಾಗ ಬದುಕಿಗೆ ಅರ್ಥ ಬರುತ್ತದೆ. ದುಡಿದು ಗಳಿಸಿದ ಸಂಪತ್ತಿನಲ್ಲಿ ಇಲ್ಲದವರಿಗೆ ದಾನ ಮಾಡಬೇಕು ಎಂದರು.

ADVERTISEMENT

ಹೊಸದುರ್ಗ ಕಾಗಿನೆಲೆ ಕನಕಗುರುಪೀಠದ ಈಶ್ವರನಂದಪುರಿ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನದಲ್ಲಿ ಸಮಸ್ಯೆ ಬಂದಾಗ ತಾಳ್ಮೆ, ಹೊಂದಾಣಿಕೆಯಿಂದ ಅರಿತು ಜೀವನ ಸಾಗಿಸಬೇಕು ಎಂದು ಹೇಳಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಪ್ರತಿಷ್ಠೆ, ಆಡಂಬರ ಪ್ರದರ್ಶಿಸಲು ಕೆಲವರು ಅದ್ದೂರಿ ವಿವಾಹಕ್ಕೆ ಮೊರೆ ಹೋಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದು ಕೊನೆ ಯಾಗಬೇಕು ಎಂದು ತಿಳಿಸಿದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಸರಳ ವಿವಾಹಗಳು ನಗರ ಪ್ರದೇಶಗಳಿಗೂ ವಿಸ್ತರಣೆ ಆಗಬೇಕು. ಆಗ ಅನಗತ್ಯ ಖರ್ಚು ತಡೆಗಟ್ಟಲು ಸಾಧ್ಯವಿದೆ ಎಂದರು.

ಭೂದಾನಿ ರಂಗನಗೌಡ ದಂಪತಿ, ತಹಶೀಲ್ದಾರ್ ನರಸಪ್ಪ ಅವರನ್ನು ಸನ್ಮಾನಿಸಲಾಯಿತು. ಅಗತೀರ್ಥ ಸ್ವಾಮೀಜಿ, ಗವಿಸಿದ್ದೇಶ್ವರ ಸ್ವಾಮೀಜಿ ಸುಳೇಕಲ್, ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ, ವೆಂಕಟಗಿರಿ ಕ್ಯಾಂಪಿನ ಸಿದ್ದರಾಮೇಶ್ವರ ಶರಣರು, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕುರುಬ ಸಂಘದ ಕಾನೂನು ಸಲಹೆಗಾರ ನಿರುಪಾದೆಪ್ಪ ಗುಡಿಹಾಳ ವಕೀಲ, ಜಿ.ಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಚಿದಾನಂದಯ್ಯ ಗುರುವಿನ್, ಮಾದಯ್ಯ ಗುರುವಿನ್, ಸುಕಾಲಪೇಟೆ ಗುರು ನಂಜುಂಡೇಶ್ವರ ಮಠದ ನಂಜುಂಡಯ್ಯ ಗುರುವಿನ್, ಬೀರಪ್ಪ ಪೂಜಾರಿ, ಗ್ರಾ.ಪಂ ಅಧ್ಯಕ್ಷ ಮಹಾಂತೇಶ ಹಿರೇಗೌಡರ್ ಇದ್ದರು.

ಇದಕ್ಕೂ ಮುನ್ನ ಮಹಿಳೆಯರು ಕಳಸ ಹೊತ್ತು ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.