ಜಿ. ಕರೆಮ್ಮ ನಾಯಕ
ರಾಯಚೂರು: ‘ಗ್ಯಾರಂಟಿ ಯೋಜನೆಗಳಿಂದಾಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಿಗೆ ಬೆಲೆಯೇ ಇಲ್ಲವಾಗಿದೆ. ಗ್ಯಾರಂಟಿಯಿಂದಾಗಿ ಅನ್ಯ ಯೋಜನೆಗಳಿಗೆ ಅನುದಾನ ದೊರಕದಿರುವ ಬಗ್ಗೆ ಎಲ್ಲ ಪಕ್ಷಗಳ ಶಾಸಕರಲ್ಲೂ ಅಸಮಾಧಾನ ಇದೆ‘ ಎಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.
‘ಜನ ಸಾಮಾನ್ಯರಿಗೆ ನೇರವಾಗಿ ಅನುಕೂಲವಾಗುವ ಯೋಜನೆಗಳಿಗೆ ನನ್ನ ವಿರೋಧವಿಲ್ಲ. ದೇವದುರ್ಗ ಕ್ಷೇತ್ರಕ್ಕೆ ಕೆಕೆಆರ್ಡಿಬಿಯ ಅನುದಾನ ದೊರಕುತ್ತಿದೆ. ಆದರೆ, ಸರ್ಕಾರ ಇನ್ನುಳಿದ ಯೋಜನೆಗಳಿಗೆ ಅನುದಾನ ಕೊಡದಿರುವ ಬಗ್ಗೆ ಎಲ್ಲ ಶಾಸಕರಿಗೂ ಅಸಮಾಧಾನವಿದೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಕಳೆದ ವರ್ಷದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆಯಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳ ಬಿಲ್ ಬಾಕಿ ಉಳಿದುಕೊಂಡಿವೆ. ಹಣ ಇಲ್ಲದ ಕಾರಣ ಸಾರ್ವಜನಿಕರು ಕೇಳುವ ಸಣ್ಣಪುಟ್ಟ ಮೂಲಸೌಕರ್ಯಗಳನ್ನು ಸಹ ಒದಗಿಸಲು ಸಾಧ್ಯವಾಗುತ್ತಿಲ್ಲ‘ ಎಂದು ಹೇಳಿದರು.
‘ಜೂನ್ 27ರಂದು ಚಿಕ್ಕಹೊನ್ನಕುಣಿ ಬಳಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಮೆ ಅನಾವರಣಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಬರುತ್ತಿದ್ದಾರೆ. ದೇವದುರ್ಗ ಪಟ್ಟಣದಲ್ಲಿ ನಡೆಯಲಿರುವ ಜನತಾದಳ ಸಮಾವೇಶದಲ್ಲೂ ಭಾಗವಹಿಸಲಿದ್ದಾರೆ‘ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.