ರಾಯಚೂರು: ದಕ್ಷಿಣ ಮಧ್ಯೆ ರೈಲ್ವೆ (ಎಸ್ಸಿಆರ್) ಗುಂತಕಲ್ ವಿಭಾಗದ ವ್ಯಾಪ್ತಿಗೆ ಬರುವ ರಾಯಚೂರು ರೈಲು ನಿಲ್ದಾಣದ ಮುಂಭಾಗದಲ್ಲಿ ಬುಧವಾರ ನಾಗರಿಕರ ರಕ್ಷಣೆ ಕುರಿತು ತಾಲೀಮು (ಮಾಕ್ ಡ್ರಿಲ್) ನಡೆಸಲಾಯಿತು.
ರೈಲ್ವೆ ಸಿವಿಲ್ ಡಿಫೆನ್ಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ತಂಡ ಮಾಕ್ ಡ್ರಿಲ್ ಮಾಡಿದೆ. ದೇಶದಲ್ಲಿ ಶತ್ರು ರಾಷ್ಟ್ರ ದಾಳಿ ನಡೆಸಿದ ಸಂದರ್ಭದಲ್ಲಿ ನಾಗರಿಕರ ರಕ್ಷಣೆ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.
ಪಟಾಕಿ ಸಿಡಿಸಿ ಬಾಂಬ್ ದಾಳಿ ಎಂದು ಬಿಂಬಿಸಿ ಹಸಿರು ಹಾಗೂ ಕೆಂಪು ಬಾವುಟ ಪ್ರದರ್ಶಿಸಿ ನಾಗರಿಕರಿಗೆ ದಾಳಿಯ ಕುರಿತು ಡಂಗೂರ ಸಾರಲಾಯಿತು.
ಬಳಿಕ ದಾಳಿಯಿಂದ ಗಾಯಗೊಂಡು ನೆಲಕ್ಕೆ ಬಿದ್ದವರು ಚೀರಾಡುತ್ತಾ ಸಹಾಯಕ್ಕೆ ಕೋರಿದರು. ಅನೇಕರು ಕೈ ಕಾಲು, ತಲೆಗೆ ಗಾಯಗೊಂಡವರನ್ನು ತಮ್ಮ ಭುಜದ ಮೇಲೆ, ಸ್ಟ್ರೇಚರ್ ಮೂಲಕ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿದರು.
ಅಗತ್ಯ ಪ್ರಮಾಣದಲ್ಲಿ ಸ್ಟ್ರೇಚರ್ ಇಲ್ಲದ ವೇಳೆ ಪ್ಲಾಸ್ಟಿಕ್ ಚೀಲ, ಬಂಬುಗಳಿಂದ ತಯಾರಿಸಿದ ಸ್ಟ್ರೇಚರ್, ಹಗ್ಗವನ್ನು ಸ್ಟ್ರೇಚರ್ ತರಹ ಮಾಡಿ ಸಾಗಿಸುವ ಬಗ್ಗೆ ಹಾಗೂ ಅಲ್ಲಿಯೇ ಪ್ರಥಮ ಚಿಕಿತ್ಸೆ ಘಟಕ, ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಚಿಕಿತ್ಸೆ ನೀಡುವ ವಿಧಾನವನ್ನು ತೋರಿಸಲಾಯಿತು.
ಮತ್ತೊಂದೆಡೆ ಅಗ್ನಿ ದುರಂತ ಸಂಭವಿಸಿದಾಗ ಯಾವ ರೀತಿಯಲ್ಲಿ ಬೆಂಕಿ ನಂದಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟಿಗೆಗಳಿಗೆ ಬೆಂಕಿ ಹೊತ್ತಿಸಿ ಅಣಕು ಪ್ರದರ್ಶನ ಮಾಡಲಾಯಿತು. ಇದೇ ವೇಳೆ ದಾಳಿಯಲ್ಲಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಾಗ ಯಾವ ರೀತಿಯಲ್ಲಿ ಪ್ರಾಣ ಕಾಪಾಡಬೇಕು ಎಂಬ ಕುರಿತು ಪ್ರಯಾಣಿಕರಿಗೆ ತಿಳಿಸಲಾಯಿತು.
ರೈಲ್ವೆ ಪೊಲೀಸರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.