ರಾಯಚೂರು: ದೇಶದ ಜನರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆಯ ಬೇಕಾದರೆ ಸಂವಿಧಾನವನ್ನು ಅರಿತುಕೊಳ್ಳುವುದು ಆದ್ಯ ಕರ್ತವ್ಯ ಎಂದು ಪ್ರಾಧ್ಯಾಪಕ ಶರಣಪ್ಪ ಸೈದಾಪುರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ, ಹೈದರಾಬಾದ್ ಕರ್ನಾಟಕ ಸರ್ಕಾರಿ ಅಧ್ಯಾಪಕರ ಸಂಘ ಹಾಗೂ ಪ್ರಜ್ಞಾ ಕಾನೂನು ಸಮಿತಿಯಿಂದ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ‘ಸಂವಿಧಾನದೆಡೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದರಿಂದ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾತಂತ್ರ್ಯ, ಸಮಾನತೆ ಸಹೋದರತ್ವ ಅನ್ವಯವಾಗುತ್ತವೆ. ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ ಎಂದರು.
ಸಿಂಧನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸರಸ್ವತಿ ಪಾಟೀಲ ಮಾತನಾಡಿ, ಸಂವಿಧಾನದಲ್ಲಿ ಸರ್ವ ಜನರ ಹಿತದೊಂದಿಗೆ ಮಹಿಳೆಯರಿಗೂ ಕೂಡ ವಿಶೇಷವಾದ ಸ್ಥಾನಮಾನಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ದಸ್ತಗೀರ್ಸಾಬ್ ದಿನ್ನಿ ಮಾತನಾಡಿ, ಸಂವಿಧಾನವು ಹಲವಾರು ಮಹತ್ವದ ಹಕ್ಕುಗಳನ್ನು ನೀಡಿದ್ದು ಸಾಮಾಜಿಕ ಬದುಕಿಗೆ ಪೂರಕವಾಗಿವೆ. ಸಂವಿಧಾನದ ಆಶಯಗಳಿಗೆ ವಿರೋಧಿಯಾದ ಘಟನೆಗಳು ದೇಶದಲ್ಲಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಂವಿಧಾನವನ್ನು ಗೌರವಿಸಬೇಕು. ಬೇರೆ ದೇಶಗಳಿಗೂ ಮಾದರಿಯಾಗುವಂತಹ ಸಂವಿಧಾನವನ್ನು ರೂಪಿಸಿಕೊಟ್ಟ ಡಾ ಅಂಬೇಡ್ಕರ್ ಅವರ ಕಾರ್ಯವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಜೆ.ಎಲ್. ಈರಣ್ಣ, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ, ಎನ್ಎಸ್ಎಸ್ ಯೋಜನಾಧಿಕಾರಿ ಗೌಡಪ್ಪ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.