ADVERTISEMENT

ಎನ್ಎಸ್‌ಬಿ ಫೌಂಡೇಷನ್‌ನಿಂದ ಉಚಿತ ಆ್ಯಂಬುಲನ್ಸ್ ಸೇವೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 16:04 IST
Last Updated 4 ಮೇ 2021, 16:04 IST
ರಾಯಚೂರಿನ ನಗರಸಭೆ ಕಚೇರಿ ಮುಂದೆ ಎನ್.ಎಸ್. ಬೊಸರಾಜು ಫೌಂಡೇಶನ್ ವತಿಯಿಂದ ಉಚಿತ ಆ್ಯಂಬುಲನ್ಸ್‌ ಸೇವೆ ಹಾಗೂ ರಾಸಾಯನಿಕ ಔಷಧಿ ಸಿಂಪಡಣೆ ವಾಹನಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಮಂಗಳವಾರ ಹಸಿರು ನಿಶಾನೆ ತೋರಿಸಿದರು
ರಾಯಚೂರಿನ ನಗರಸಭೆ ಕಚೇರಿ ಮುಂದೆ ಎನ್.ಎಸ್. ಬೊಸರಾಜು ಫೌಂಡೇಶನ್ ವತಿಯಿಂದ ಉಚಿತ ಆ್ಯಂಬುಲನ್ಸ್‌ ಸೇವೆ ಹಾಗೂ ರಾಸಾಯನಿಕ ಔಷಧಿ ಸಿಂಪಡಣೆ ವಾಹನಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಮಂಗಳವಾರ ಹಸಿರು ನಿಶಾನೆ ತೋರಿಸಿದರು   

ರಾಯಚೂರು: ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದು, ಸರ್ಕಾರ ಆಮ್ಲಜನಕ, ವೆಂಟಿಲೇಟರ್ ಹಾಗೂ ಸೂಕ್ತ ಹಾಸಿಗೆ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಎನ್. ಎಸ್. ಬೋಸರಾಜು ಫೌಂಡೇಶನ್‌ನಿಂದ ಕೋವಿಡ್ ರೋಗಿಗಳಿಗೆ ತುರ್ತು ಸೇವೆಗಳಿಗೆ ಉಚಿತವಾಗಿ ಆ್ಯಂಬುಲನ್ಸ್ ವ್ಯವಸ್ಥೆ ಮಾಡಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಹೇಳಿದರು.

ಇಲ್ಲಿನ ನಗರಸಭೆ ಕಚೇರಿ ಮುಂದೆ ಮಂಗಳವಾರ ಎನ್.ಎಸ್. ಬೊಸರಾಜು ಫೌಂಡೇಷನ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಹಾಗೂ ರಸಾಯನಿಕ ಔಷಧಿ ಸಿಂಪಡಣೆ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ನಗರಸಭೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರೂ ಸಂಪೂರ್ಣ ಪರಿಸ್ಥಿತಿ ಹತೋಟಿಯಲ್ಲಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಎನ್.ಎಸ್ ಬೊಸರಾಜು ಫೌಂಡೇಶನ್ ಕಳೆದ ವರ್ಷವೂ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಿ ಸಂಕಷ್ಟಕ್ಕೆ ನೆರವಾಗಿತ್ತು. ಈ ಬಾರಿ ಉಚಿತ ಆ್ಯಂಬುಲನ್ಸ್ ಸೇವೆ ಹಾಗೂ ರಾಸಾಯನಿಕ ಔಷಧಿ ಸಿಂಪಡಣೆ ವಾಹನದ ಮೂಲಕ ತುರ್ತು ಸೇವೆಗೆ ನೆರವಾಗುತ್ತಿರುವುದು ಶ್ಲಾಘನೀಯ. ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡಿ, ದೇಶ, ರಾಜ್ಯ ಮತ್ತು ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಆಗುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜಿನ್ ಸಿಗದ ಕಾರಣ 24 ಜನ ರೋಗಿಗಳು ಮೃತಪಟ್ಟಿರುವ ಘಟನೆ ಖಂಡನೀಯ. ಆ್ಯಂಬುಲನ್ಸ್‌, ಹಾಸಿಗೆ, ಐಸಿಯು ಹಾಗೂ ವೈದ್ಯಕೀಯ ಸೇವೆ ನೀಡಲು ವಿವಿಧ ಸಂಘ ಸಂಸ್ಥೆಗಳು ಜನರ ನೆರವಿಗೆ ಧಾವಿಸಬೇಕಾಗಿದೆ ಎಂದರು.

ನಗರಸಭೆ ಸದಸ್ಯ ಜಯಣ್ಣ, ಜಿಂದಪ್ಪ, ಸಾಜೀದ್ ಸಮೀರ್, ಮುಖಂಡ ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಕೆ. ಅಸ್ಟಂಪಾಷಾ, ಮೊಹಮ್ಮದ್ ಶಾಲಂ ವಿನೋದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.