
ಮುದಗಲ್: ‘ನಂದವಾಡಿಗಿ ಏತ ನೀರಾವರಿ ಯೋಜನೆಯಲ್ಲಿ ಬನ್ನಿಗೋಳ, ಜನತಾಪುರ, ಹೂನೂರು, ಮಾಕಾಪುರ, ತುರಡಗಿ ಸೇರಿ ಅಂಕಲಗಿ ಮಠ ಭಾಗದ 34 ಹಳ್ಳಿಗಳು ಸೇರ್ಪಡೆಯಾಗಿಲ್ಲ’ ಎಂದು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಮುದಗಲ್ ಸಮೀಪದ ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ಕಾರ ಸೂಚನೆ ನೀಡಿದರೆ ಹೆಚ್ಚುವರಿ ಗ್ರಾಮಗಳನ್ನು ಸೇರ್ಪಡೆ ಮಾಡುತ್ತೇವೆ. ಗುತ್ತಿಗೆದಾರರ ನಿರ್ಲಕ್ಷ್ಯ, ಅನುದಾನದ ಕೊರತೆ, ಸ್ವಾಧೀನ ಪಡಿಸಿಕೊಂಡ ರೈತರಿಗೆ ಹಣ ನೀಡುವ ವಿಳಂಬ ಸೇರಿದಂತೆ ಹಲವಾರು ತಾಂತ್ರಿಕ ತೊಂದರೆಗಳಿವೆ’ ಎಂದರು.
‘ಕಾಮಗಾರಿಯನ್ನು ನಾಲ್ಕು ಹಂತದಲ್ಲಿ ನೀಡಲಾಗಿದೆ. ನಾಲ್ಕು ಕಂಪನಿಗಳು ಗುತ್ತಿಗೆ ಪಡೆದಿವೆ. ತಾಲ್ ಕಂಪನಿ ಕಾಮಗಾರಿ ವಿಳಂಬವಾಗಿದ್ದು ಬೇಗ ಮುಗಿಸಲು ಕಂಪನಿಗೆ ಸೂಚನೆ ನೀಡಲಾಗಿದೆ. ಶೀಘ್ರವೇ ಮುಗಿಸದೆ ಇದ್ದರೆ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಧ್ಯಪ್ರದೇಶದ ಕುಂಡಲಗ ಮಾದರಿಯಲ್ಲಿ ಹನಿ ನೀರಾವರಿ ಮಾಡುತ್ತೇವೆ. ಸರ್ಕಾರ ಸೂಚಿಸಿದರೆ ಹರಿ ನೀರಾವರಿ ಮಾಡುತ್ತೇವೆ. ಅನುದಾನದ ಕೊರತಯಿಂದ ನಾಲೆ, ರಸ್ತೆ ದುರಸ್ತಿ ಮಾಡಲು ಆಗುತ್ತಿಲ್ಲ’ ಎಂದು ಮಾಹಿತಿ ನೀಡಿದರು.
ನಂಡವಾಡಗಿ, ತೊಂಡಿಹಾಳ ಮತ್ತು ಖೈರವಾಡಗಿ ಜಾಕ್ವೆಲ್ಗಳನ್ನು ಪರಿಶೀಲಿಸಿ ಕಾಮಗಾರಿ ವಿಳಂಬವಾಗಿದ್ದಕ್ಕೆ ತಾಲ್ ಕಂಪನಿ ಎಂಜಿನಿಯರ್ಗೆ ತರಾಟೆ ತಗೆದುಕೊಂಡರು. ಗುಣಮಟ್ಟದಿಂದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ಸಿಇ ಜಿ.ಜಿ. ಪವಾರ, ಎಸ್.ಸಿ ಆರ್.ಜಿ. ರಾಠೋಡ, ಎಂ.ಡಿ. ಕಚೇರಿಯ ಇಇ ರಾಜೇಶ, ಎಇಇ ವಿನಯಕುಮಾರ, ಇಇ ಸುರೇಂದ್ರರಡ್ಡಿ, ಎಇಇ ಎಸ್.ಎಸ್. ಅಡಲ್ಗೇರಿ, ಇಇ ಅಮರೇಶ ಮೇಟಿ, ಎಇಇ ಚಂದ್ರಕಾಂತ ಮಾದಯ್ಯ, ನಂದೇಶ, ನಾಗೇಶ, ಅನೀಲ ಕುಮಾರ, ಮಲ್ಲಪ್ಪ, ಶಾಖಾಧಿಕಾರಿಗಳು ಹಾಗೂ ಗುತ್ತಿಗೆದಾರರು ಇದ್ದರು.
‘ಬಿಟ್ಟು ಹೋದ 34 ಹಳ್ಳಿಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ಭರವಸೆ ಹುಸಿಯಾದರೆ ರೈತರ ಜತೆ ಚರ್ಚಿಸಿ ಪ್ರತಿಭಟಿನೆ ಮಾಡುತ್ತೇವೆ’ 9ಎ ಕಾಲುವೆ ಹೋರಾಟ ಸಮಿತಿಯ ಅಧ್ಯಕ್ಷ ನಾಗನಗೌಡ ತುರಡಗಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.