ರಾಯಚೂರು: ವಿದ್ಯುತ್ ಗ್ರಾಹಕರಿಗಾಗುವ ಕಿರುಕುಳ ಹಾಗೂ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಹೈದರಾಬಾದ್ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘ ಸ್ಥಾಪಿಸಲಾಗಿದ್ದು, ನಿಯಮಾನುಸಾರ ನ್ಯಾಯ ದೊರೆಯದಿದ್ದರೆ ಸಂಘದ ಸಹಾಯ ಪಡೆದುಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ಶರತಕುಮಾರ್ ಕಳಸ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಅಧಿನಿಯಮ–2003 ರಂತೆ ಗ್ರಾಹಕರು ಜೆಸ್ಕಾಂಗೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಆದರೆ, ವಿದ್ಯುತ್ ಬಳಕೆದಾರರಲ್ಲಿ ನಿಯಮಗಳ ತಿಳಿವಳಿಕೆ ತುಂಬಾ ಕಡಿಮೆ ಇರುವುದರಿಂದ ಮಧ್ಯವರ್ತಿಗಳಿಂದ ಮೋಸಕ್ಕೆ ಒಳಗಾಗುವ ಪ್ರಸಂಗಗಳು ಹೆಚ್ಚಾಗುತ್ತಿವೆ ಎಂದರು.
ಹೊಸ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ನೇರವಾಗಿ ಜೆಸ್ಕಾಂಗೆ ಅರ್ಜಿ ಸಲ್ಲಿಸಲು ಕೆಲವರು ಹಿಂದೇಟು ಹಾಕುತ್ತಾರೆ. ಅರ್ಜಿ ಸಲ್ಲಿಸಿದರೂ ಅನಗತ್ಯ ವಿಳಂಬ ನೀತಿ ಅನುಸರಿಸುವುದು ಸಾಮಾನ್ಯವಾಗಿದೆ. ಮೀಟರ್ ಬದಲಾವಣೆ, ಗುಣಮಟ್ಟದ ಓಲ್ಟೇಜ್ ಇಲ್ಲದಿರುವುದು, ಶಿಥಿಲವಾದ ಕಂಬಗಳನ್ನು ಬದಲಾಯಿಸುವುದು ಮುಂತಾದ ವಿಚಾರಗಳಲ್ಲಿ ಜನರು ದೂರು ನೀಡಲು ಮುಂದೆ ಹೋಗುತ್ತಿಲ್ಲ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗಿವೆ ಎಂದು ಹೇಳಿದರು.
ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತಪ್ಪಿದಲ್ಲಿ ದಿನಕ್ಕೆ ₹200 ಗ್ರಾಹಕರಿಗೆ ದಂಡವಾಗಿ ಜೆಸ್ಕಾಂ ಪಾವತಿಸಬೇಕಾಗುತ್ತದೆ. ರಾಯಚೂರಿನ ಏಗನೂರು ಟೆಂಪಲ್ ಹತ್ತಿರ ವೆಂಕಟಸ್ವಾಮಿ ಅವರು ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಸಂಪರ್ಕ ಕೊಟ್ಟಿರಲಿಲ್ಲ. ವಿಳಂಬಕ್ಕಾಗಿ ಆಯೋಗವು ₹16 ಸಾವಿರ ದಂಡ ವಿಧಿಸಿ ಗ್ರಾಹಕರಿಗೆ ಪಾವತಿಸಿದೆ ಎಂದು ತಿಳಿಸಿದರು.
ಇಂತಹ ಅನೇಕ ಪ್ರಕರಣಗಳಲ್ಲಿ ಗ್ರಾಹಕರಿಗೆ ನ್ಯಾಯ ದೊರಕಿಸಲಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಎಸ್.ಮೆಹಬೂಬ್, ಶಿವಕುಮಾರ, ಸುರೇಶರೆಡ್ಡಿ, ದಾನಪ್ಪ ಸಜ್ಜನ್, ರಮೇಶಕುಮಾರ್ ಎನ್. ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.