ಹಟ್ಟಿಚಿನ್ನದಗಣಿ: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳು ಸೇರಿ ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯುತ್ ಕಲ್ಪಿಸಲು ಆರಂಭಿಸಿದ್ದ ಯೋಜನೆಯು ನಿಲೋಗಲ್ ಗ್ರಾಮದ ಬಳಿ ನನೆಗುದಿದೆ ಬಿದ್ದಿದೆ.
ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕುವುದಕ್ಕೆ ರೈತರು ಗುತ್ತಿಗೆದಾರರಿಗೆ ಅವಕಾಶ ನೀಡದಿರುವುದು ಯೋಜನೆ ವಿಳಂಬವಾಗಲು ಕಾರಣ. ಕಾಮಗಾರಿ ಅರ್ಧಕ್ಕೆ ನಿಂತಿದೆ. ನಿರಂತರ ವಿದ್ಯುತ್ ಇನ್ನೇನು ನಮ್ಮ ಊರಿಗೂ ಬಂತು ಎಂದು ಗ್ರಾಮಸ್ಥರು ಕಾತರದಿಂದ ಕಾಯುತ್ತಿರುವಾಗಲೇ ನಿರಾಶೆ ಆವರಿಸಿಕೊಂಡಿದೆ.
ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯುತ್ ದೊರೆಕಿಸುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದ ’ನಿರಂತರ ಜ್ಯೋತಿ’ ಯೋಜನೆ ಸ್ಥಳೀಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಂಟುತ್ತಾ ಸಾಗಿದೆ. 2011 ರಲ್ಲಿ ಸರ್ಕಾರ ಗ್ರಾಮೀಣ ಪ್ರದೇಶಕ್ಕೆ ದಿನಕ್ಕೆ ೨೨ ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಬೇಕೆನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಆರಂಭದಲ್ಲಿ ಯೋಜನೆ ತೀವ್ರಗತಿಯಲ್ಲಿ ನಡೆಯಿತಾದರೂ ನಂತರ ಕುಂಟುತ್ತಾ ಸಾಗಿದೆ. ಲಿಂಗಸುಗೂರು ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆ ಬದಿಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಕೆಲ ಗ್ರಾಮಗಳಿಗೆ ಇನ್ನೂ ಕಂಬಗಳು ತಲುಪಿಸುವ ಕೆಲಸ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ವ್ಯಾಪ್ತಿಗೆ ತಾಲ್ಲೂಕಿನ 193 ಗ್ರಾಮಗಳು ಒಳಪಡುತ್ತವೆ. ಬೆಂಗಳೂರಿನ ರಾಮಲಿಂಗಂ ಕಂಪೆನಿ ಯೋಜನೆಯನ್ನು ಗುತ್ತಿಗೆ ಪಡೆದಿದ್ದು, ಈಗಾಗಲೇ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಕೆಲ ಅಡೆತಡೆಗಳು ಎದುರಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.