ADVERTISEMENT

‘ಕಾರಣವಿಲ್ಲದೆ ಜ್ಞಾನಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರ ರದ್ದು’

​ಪ್ರಜಾವಾಣಿ ವಾರ್ತೆ
Published 14 ಮೇ 2019, 13:46 IST
Last Updated 14 ಮೇ 2019, 13:46 IST

ರಾಯಚೂರು: ನಗರದಲ್ಲಿ ಈಚೆಗೆ ನಡೆದ ಗುಲ್ಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಅಕ್ರಮಕ್ಕೂ ಜ್ಞಾನಗಂಗಾ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ. ಆದರೂ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸೂಕ್ತ ಕಾರಣ ನೀಡದೇ ಏಕಾಏಕಿ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಸಮರ್ಪಕ ಕಾರಣ ಕೊಡಬೇಕು ಎಂದು ಜ್ಞಾನಗಂಗಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಾ ಶ್ರೀನಿವಾಸ್ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಮನೆಯಲ್ಲಿ ಕುಳಿತು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ನಮ್ಮ ಕಾಲೇಜಿನಿಂದ ಯಾವುದೇ ವಿದ್ಯಾರ್ಥಿ ಕಂಡುಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧ ಇಲ್ಲದಿದ್ದರೂ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ರದ್ದು ಪಡಿಸಲಾಗಿದೆ. ಪರೀಕ್ಷೆ ನಡೆಸುವುದಕ್ಕೆ ಕಾಲೇಜಿಗೆ ಕಳುಹಿಸಿದ್ದ ಪರೀಕ್ಷಾ ಸಾಮಗ್ರಿಗಳು ಕಾಲೇಜಿನಲ್ಲಿಯೇ ಉಳಿದುಕೊಂಡಿವೆ ಎಂದರು.

ಪರೀಕ್ಷಾ ಕೇಂದ್ರ ರದ್ದುಪಡಿಸುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇದೆ. ಈ ಬಗ್ಗೆ ಪ್ರಶ್ನೆಯಿಲ್ಲ. ಅನಗತ್ಯವಾಗಿ ಪರೀಕ್ಷಾ ಅಕ್ರಮದೊಂದಿಗೆ ಕಾಲೇಜಿನ ಹೆಸರು ಸೇರ್ಪಡೆಗೊಳಿಸಿ, ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗುವಂತೆ ಮಾಡಿದ್ದಾರೆ. ಈ ಬಗ್ಗೆ ಕುಲಪತಿ ಅವರನ್ನು ಪ್ರಶ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಅಕ್ರಮ ಪರೀಕ್ಷೆಗೂ ಜ್ಞಾನಗಂಗಾ ಕಾಲೇಜುಗೂ ಯಾವುದೇ ಸಂಬಂಧಲ್ಲ ಎಂದು ಜಾಗೃತ ದಳದ ಅಧ್ಯಕ್ಷ ಪ್ರಾಣೇಶ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ. ಆದರೂ ವಿವಿ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡು ಪರೀಕ್ಷಾ ಕೇಂದ್ರವನ್ನು ರದ್ದು ಪಡಿಸಿದ್ದು ಇದಕ್ಕೆ ಸ್ಪಷ್ಟ ಕಾರಣ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.