ADVERTISEMENT

ಡಿಎಪಿ ಗೊಬ್ಬರ ಪೂರೈಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 13:21 IST
Last Updated 2 ಸೆಪ್ಟೆಂಬರ್ 2021, 13:21 IST
ಸಿಂಧನೂರಿನ ಕೃಷಿ ಇಲಾಖೆಯ ಕಚೇರಿಯಲ್ಲಿ ಗುರುವಾರ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಮತ್ತು ಡೀಲರ್‌ಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು
ಸಿಂಧನೂರಿನ ಕೃಷಿ ಇಲಾಖೆಯ ಕಚೇರಿಯಲ್ಲಿ ಗುರುವಾರ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಮತ್ತು ಡೀಲರ್‌ಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು   

ಸಿಂಧನೂರು: ರೈತರಿಗೆ ಸಕಾಲಕ್ಕೆ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಅವರು ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಕೃಷಿ ಇಲಾಖೆಯ ಕಚೇರಿಯಲ್ಲಿ ಗುರುವಾರ ನಡೆದ ರಸಗೊಬ್ಬರ ಪೂರೈಕೆಯ ಪ್ರತಿನಿಧಿಗಳು ಮತ್ತು ಡೀಲರ್‌ಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಡಿಎಪಿ ಗೊಬ್ಬರದ ಮೇಲೆ ₹ 500 ಕೇಂದ್ರ ಸಬ್ಸಿಡಿ ನೀಡಿದ ಹಿನ್ನೆಲೆಯಲ್ಲಿ ರೈತರಿಂದ ಈ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಯೂರಿಯಾ, ಪೋಟ್ಯಾಷಿಯಂ, ಕಾಂಪ್ಸೆಕ್ಸ್ ಗೊಬ್ಬರಕ್ಕೆ ಬೇಡಿಕೆ ಇದೆಯಾದರೂ ಎಲ್ಲ ರೈತರು ಡಿಎಪಿ ಗೊಬ್ಬರವನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಈಗ ಜೋಳದ ಬೆಳೆ ಬಿತ್ತನೆ ಮಾಡುತ್ತಿರುವುದರಿಂದ ಡಿಎಪಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿನಿಧಿಗಳು ಕಂಪನಿಗಳ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಹೇಳಿದರು.

ADVERTISEMENT

ಕೃಷಿ ಇಲಾಖೆಯ ಜಿಲ್ಲಾ ನಿರ್ದೇಶಕ ನಹೀಮ್ ಹುಸೇನ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರೈತರು ರಸಗೊಬ್ಬರ ಬಳಸುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ಕ್ಷೀಣಿಸುತ್ತಿದೆ. ಹೀಗಾಗಿ ಈ ಕುರಿತು ಅರಿವು ಮೂಡಿಸಬೇಕಾದುದ್ದು ಅತ್ಯವಶ್ಯಕವಾಗಿದೆ. ಸಾಧನೆಯ ಗುರಿಗೆ ತಕ್ಕಂತೆ ಹಂಗಾಮಿನ ಬೆಳೆಗಾಗಿ ಸೊಸೈಟಿಗಳು ಮತ್ತು ಡೀಲರ್‌ಗಳಿಗೆ ಗೊಬ್ಬರ ಪೂರೈಸುವಂತೆ ಅವರು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಶಾಂತ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಸಂಘದ ಅಧ್ಯಕ್ಷ ಎನ್.ಸಣ್ಣಭೀಮನಗೌಡ ಗೊರೇಬಾಳ, ಸದಸ್ಯರಾದ ಬಸವರಾಜ ಹಿರೇಗೌಡರ್, ಜಿ.ಸತ್ಯನಾರಾಯಣ, ಬಿ.ಹರ್ಷ, ಶಂಭುಲಿಂಗನಗೌಡ, ಮಲ್ಲಿಕಾರ್ಜುನ, ಎಂ.ಡಿ.ಅಲ್ತಾಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.