ಸಿಂಧನೂರು: ‘ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮನುಷ್ಯನಿಗೆ ಉತ್ತಮ ಆರೋಗ್ಯ ವೃದ್ಧಿಯಾಗಲಿದೆ. ಇಲ್ಲದಿದ್ದರೆ ದೇಹ ನಿಶ್ಯಕ್ತಿ ಹೊಂದುವ ಜೊತೆಗೆ ಅನಾರೋಗ್ಯಕ್ಕೀಡಾಗುತ್ತದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ ಸಿ.ವಗ್ಗಾ ಅಭಿಪ್ರಾಯಪಟ್ಟರು.
ಸ್ಥಳೀಯ ಸನ್ರೈಸ್ ಡಿ-ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಸನ್ರೈಸ್ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ದಿನ ಆಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಸಹಜ ಹೆರಿಗೆ ಆಗುವ ಜೊತೆಗೆ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಪೌಷ್ಟಿಕ ಆಹಾರ ಇಲ್ಲದಿದ್ದರೆ ಹುಟ್ಟುವ ಮಕ್ಕಳಲ್ಲಿ ಕಣ್ಣು ದೋಷ, ಅಂಗವಿಕಲತೆ, ಹೃದಯ ರಂಧ್ರ ಕಾಣಿಸಿಕೊಳ್ಳಲಿದೆ. ಆದ್ದರಿಂದ ಕಲಬೆರಕೆ ಮತ್ತು ಹೊರಗಿನ ಆಹಾರ ಸೇವಿಸುವುದನ್ನು ಬಿಡಬೇಕು’ ಎಂದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಮನಗೌಡ, ಆರೋಗ್ಯ ಶಿಕ್ಷಣ ಅಧಿಕಾರಿ ಗೀತಾ ಹಿರೇಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ, ಸನ್ರೈಸ್ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಕೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಅಪೌಷ್ಟಿಕ ಮಕ್ಕಳಿಗೆ ಪ್ರೋಟಿನ್ ಮತ್ತು ಔಷಧಗಳನ್ನು ವಿತರಿಸಲಾಯಿತು. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಿ, ಉಡಿ ತುಂಬಲಾಯಿತು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಮಾರುತಿ ಕಲ್ಲೂರು, ಹನುಮೇಶ ರಾಗಲಪರ್ವಿ, ತುರ್ವಿಹಾಳ ಸಿಡಿಪಿಒ ಅಶೋಕ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಪ್ರಾಚಾರ್ಯರಾದ ಲಾಜರ್ ಸಿರಿಲ್, ವಸೀಂ ಅಹ್ಮದ್, ಚಕ್ರವರ್ತಿ ಡಿ., ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಖಾಜಿಮಲಿಕ್ ವಕೀಲ, ವಕೀಲರ ಸಂಘದ ಖಜಾಂಚಿ ಶರಣಬಸವ ಉಮಲೂಟಿ, ಸನ್ರೈಸ್ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.