ಸಿಂಧನೂರು: ‘ತಾಲ್ಲೂಕಿನ ಕೋಳಬಾಳ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸಂದರ್ಭದಲ್ಲಿ ಮನೆ ಕಳ್ಳತನವಾಗಿರುವ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವರ್ಷ ಗತಿಸಿದರೂ ಸಹ ಪೊಲೀಸ್ ನಿಷ್ಕಾಳಜಿ ತೋರುತ್ತಿದ್ದಾರೆ’ ಎಂದು ನೊಂದ ವೃದ್ದೆ ಸಾವಿತ್ರಮ್ಮ ಅವರು ಶಹರ ಪೊಲೀಸ್ ಠಾಣೆ ಉದ್ಘಾಟಿಸಲು ಬಂದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ಕಣ್ಣೀರು ಹಾಕಿದರು.
‘ನನ್ನ ಮಗ ಚನ್ನನಗೌಡ ಕೋಳಬಾಳ ಪಶು ಚಿಕಿತ್ಸಾಲಯದಲ್ಲಿ ಡಿ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಕುಟುಂಬ ಸಮೇತ ಕುರುಬರ ಶಂಕ್ರಪ್ಪ ಎಂಬುವರ ಮನೆ ಮೇಲೆ ಬಾಡಿಗೆ ಇದ್ದೇವು. ನಮ್ಮ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಲಿಂಗಸುಗೂರಿಗೆ ಬೆಳಗಿನ ಸಮಯದಲ್ಲಿ ಹೋಗಿ ಸಂಜೆ ಬರುವಷ್ಟರೊಳಗಾಗಿ ಮನೆ ಕಳ್ಳತನವಾಗಿದೆ'
’ಬಂಗಾರ ಚೈನ್, ಮಗನ ಕಾಲುಚೈನ್, ಕಡಗ, ಉಂಗುರ, ಲಿಂಗದಕಾಯಿ ಸಾಮಾನು ಕಳ್ಳತನವಾಗಿದೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಬಂದು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಪ್ರಕರಣ ಕುರಿತು ಗಂಭೀರ ತನಿಖೆ ಕೈಗೊಂಡಿಲ್ಲ, ಆರೋಪಿಯನ್ನು ಬಂಧಿಸಿಲ್ಲ, ಬಂಗಾರದ ಸಾಮಾನುಗಳನ್ನು ವಾಪಾಸ್ ಕೊಟ್ಟಿಲ್ಲ. ಪೊಲೀಸ್ ಠಾಣೆಗೆ ಹೋಗಿ ಕೇಳಿದರೆ ಹುಡುಕುತ್ತಿದ್ದೇವೆಂದು ಪೊಲೀಸರು ಹೇಳುತ್ತಿದ್ದಾರೆ’ ಎಂದು ಸಾವಿತ್ರಮ್ಮ ಗೃಹ ಸಚಿವರಿಗೆ ದೂರು ಸಲ್ಲಿಸಿದರು.
ವೃದ್ಧೆಯ ಮನವಿ ಪಡೆದ ಸಚಿವರು ಮೌನವಹಿಸಿ, ಬೇರೆಯವರ ಮನವಿಯತ್ತ ಕೈ ಚಾಚಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.