ADVERTISEMENT

ಉಟಕನೂರು ಅಡವಿ ಸಿದ್ದೇಶ್ವರ ಮಠದ ಜಾತ್ರೆ: ಹೂವಿನ ರಥೋತ್ಸವದ ಮೆರುಗು

ಮಂಜುನಾಥ ಎನ್ ಬಳ್ಳಾರಿ
Published 19 ಜನವರಿ 2025, 6:26 IST
Last Updated 19 ಜನವರಿ 2025, 6:26 IST
ಕವಿತಾಳ ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ಹೊರನೋಟ
ಕವಿತಾಳ ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ಹೊರನೋಟ   

ಕವಿತಾಳ: ಪರಮ ತಪಸ್ವಿಗಳು, ನಾಡಿನ ಜನತೆಯಿಂದ ನಡೆದಾಡುವ ದೇವರು ಎಂದೇ ಕರೆಯಿಸಿಕೊಳ್ಳುತ್ತಿದ್ದ ಉಟಕನೂರು ಅಡವಿ ಸಿದ್ದೇಶ್ವರ ಮಠದ ಮರಿಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ 34ನೇ ಪುಣ್ಯಸ್ಮರಣೆ ಅಂಗವಾಗಿ ಉಟಕನೂರು ಗ್ರಾಮದಲ್ಲಿ ಜನವರಿ 21ರಂದು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಉಟಕನೂರಿನಲ್ಲಿ ಇಂದಿಗೂ ಅಡವಿ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತಿದ್ದು, ಶ್ರೀಮಠ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಅಡವಿ ಸಿದ್ದೇಶ್ವರ ಸ್ವಾಮಿಗಳ ಪರಂಪರೆ ಹೊಂದಿದೆ ಎನ್ನುವುದನ್ನು ಸಾರುತ್ತದೆ. ಭವ್ಯ ಪರಂಪರೆಯನ್ನು ಹೊಂದಿದ ಉಟಕನೂರು ಮಠ ಶರಣರ ಆಚಾರ ಪಾಲಿಸಿದೆ.

20ನೇ ಶತಮಾನದಲ್ಲಿ ಬದುಕಿದ ಗುರುಪಾದಯ್ಯಸ್ವಾಮಿ ಎನ್ನುವವರ ಮೂರನೇ ಹೆಂಡತಿಗೆ ಜನಿಸಿದ ಗಂಡು ಮಗು ಸಂಸಾರದ ಕಡೆಗೆ ಲಕ್ಷ್ಯ ಕೊಡದೆ ಹುಚ್ಚನಂತೆ ವರ್ತಿಸತೊಡಗಿದಾಗ ಚಿಂತಿತರಾದ ಗುರುಪಾದಯ್ಯ ಕೇದಾರದ ಜಗದ್ಗುರುಗಳ ಬಳಿ ತಮ್ಮ ನೋವನ್ನು ಹೇಳಿಕೊಂಡರು ಎನ್ನಲಾಗಿದೆ.

ADVERTISEMENT

ಆಗ ಅವರು ತಲೆಯಲ್ಲಿ ಸುಳಿಯಿಲ್ಲದ, ಕಾಲಲ್ಲಿ ಗೆರೆಗಳಿಲ್ಲದ ಬಾಲಕನ ದಿವ್ಯ ತೇಜಸ್ಸನ್ನು ಕಂಡು ‘ಇವನು ಹುಚ್ಚನಲ್ಲ ಜಗವನ್ನು ಮೆಚ್ಚಿಸುವ ಯೋಗಿ ಆಗುತ್ತಾನೆ’ ಎಂದು ಆಶೀರ್ವದಿಸಿದರು ಎಂದು ಹೇಳಲಾಗುತ್ತಿದೆ.

ಜಗದ್ಗುರುಗಳ ಆಶೀರ್ವಾದದಂತೆ ಮರಿಬಸವಲಿಂಗ ಎನ್ನುವ ಬಾಲಕನು ಶಿವ ಧ್ಯಾನಾಸಕ್ತರಾಗಿ ಪರರ ಕಷ್ಟ, ನಷ್ಟಗಳನ್ನು ಪರಿಹರಿಸಿದರು ಎಂದೂ ಹೇಳಲಾಗುತ್ತಿದೆ. 1992ರಲ್ಲಿ ತಾತನವರು ನಿಧನರಾದರು. ಜಿಲ್ಲೆಯಾದ್ಯಂತ ಅವರ ಗದ್ದುಗೆಗಳನ್ನು ಸ್ಥಾಪಿಸಲಾಗಿದ್ದು, ಅಪಾರ ಭಕ್ತ ಸಮೂಹ ನೆನಪಿಸಿಕೊಳ್ಳುತ್ತಿದೆ.

ಮರಿಬಸವರಾಜ ದೇಶಿಕರನ್ನು ಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿದ್ದು, ಅವರು ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಲಿಂಗೈಕ್ಕೆ ಮರಿಬಸವಲಿಂಗ ತಾತನವರ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಭಾಗವಹಿಸಲಿದ್ದಾರೆ ಎಂದು ಮಠದ ಅಡಳಿತ ಮಂಡಳಿ ತಿಳಿಸಿದೆ.

ಜಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುವುದು
ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ

ಮೌನವಾಗಿರುತ್ತಿದ್ದ ತಾತ

ಸದಾ ಮೌನವಾಗಿರುತ್ತಿದ್ದ ಮರಿಬಸವಲಿಂಗ ತಾತನವರು ಅಪರೂಪಕ್ಕೆ ಕೆಲವು ಶಬ್ದಗಳನ್ನ ಉಚ್ಚರಿಸುತ್ತಿದ್ದರು ಎನ್ನಲಾಗಿದ್ದು ಅವುಗಳನ್ನು ಅರ್ಥೈಸಿಕೊಳ್ಳುತ್ತಿದ್ದ ಭಕ್ತರು ಅವರಿಗೆ ಸ್ಪಂದಿಸುತ್ತಿದ್ದರು. ತೊದಲು ನುಡಿಗಳಿಂದಲೇ ಭಕ್ತರ ಕಷ್ಟ–ಕಾರ್ಪಣ್ಯಗಳನ್ನು ದೂರ ಮಾಡಿದ ತಾತನವರ ಪವಾಡ ಲೀಲೆಗಳನ್ನು ಭಕ್ತರು ಈಗಲೂ ನೆನೆಪಿಸಿಕೊಳ್ಳುತ್ತಾರೆ. ತಡಕಲ್‌ ಗ್ರಾಮದಲ್ಲಿ ತ್ರಿವರ್ಣ ಧ್ವಜ ಹಿಡಿದು ಓಡಾಡಿ ಹೈದರಾಬಾದ್ ಕರ್ನಾಟಕ ವಿಮೋಚನೆಯ ಬಗ್ಗೆ ಮುಂಚಿತವಾಗಿಯೇ ಮುನ್ಸೂಚನೆ ನೀಡಿದ್ದು. ಬರಡು ಎಮ್ಮೆಯಿಂದ ಹಾಲು ಕರೆದಿದ್ದು ಬರಗಾಲದಲ್ಲಿ ಮಳೆ ಬಂದಿದ್ದು ಭವಿಷ್ಯ ನುಡಿದು ದುರ್ಘಟನೆಗಳನ್ನು ತಡೆದದ್ದು ಅಸ್ವಸ್ಥ ಬಾಲಕಿ ಆರೋಗ್ಯವಂತಳಾಗಿದ್ದು ಹೀಗೆ ತಾತನವರ ನೂರಾರು ಪವಾಡಗಳನ್ನು ಭಕ್ತರು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.