ರಾಯಚೂರು: ಅತಿಸಾರಭೇದಿ ನಿಯಂತ್ರಣಕ್ಕೆ ಓ.ಆರ್.ಎಸ್. ದ್ರಾವಣ ಮತ್ತು ಜಿಂಕ್ ಮಾತ್ರೆಗಳು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ ಎಂದು ತಹಶೀಲ್ದಾರ್ ಡಾ. ಹಂಪಣ್ಣ ಹೇಳಿದರು.
ರಾಯಚೂರು ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಡಿ.ಶಾಕಿರ್ ಮಾತನಾಡಿ, ಜಿಲ್ಲೆಯಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕವು ಜೂನ್ 3 ರಿಂದ 17 ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಅತಿಸಾರಭೇದಿಯಿಂದ ಬಳಲುವ ೦-5 ವರ್ಷದೊಳಗಿನ ಮಕ್ಕಳಿಗೆ ಓ.ಆರ್.ಎಸ್.ದ್ರಾವಣ ಮತ್ತು ಜಿಂಕ ಮಾತ್ರೆಗಳನ್ನು ನೀಡುತ್ತಾರೆ. ತಾಯಂದಿರಿಗೆ ಓ.ಆರ್.ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೈ ತೊಳೆಯುವ ವಿಧಾನದ ಬಗ್ಗೆ ತಿಳಿವಳಿಕೆ ನೀಡುವರು ಎಂದರು.
ಅತಿಸಾರ ಭೇದಿಗೆ ಸರಿಯಾದ ಚಿಕಿತ್ಸೆ ಓ.ಆರ್.ಎಸ್. ಮತ್ತು ಜಿಂಕ್ ಮಾತ್ರೆ ನೀಡಿ ಮಗುವಿನ ಚುರುಕುತನವನ್ನು ಮರಳಿ ತನ್ನಿ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ಮಕ್ಕಳಲ್ಲಿ ಅತಿಸಾರ ಭೇದಿ ಆದಾಗ ಈ ಕ್ರಮಗಳನ್ನು ಪಾಲಿಸಬೇಕು. ಓ.ಆರ್.ಎಸ್. ಪ್ಯಾಕೆಟ್ನ್ನು ಒಂದು ಲೀಟರ್ ಕುಡಿಯುವ ನೀರಿನಲ್ಲಿ ಸರಿಯಾಗಿ ಮಿಶ್ರಣ ಮಾಡಿ. ಅತಿಸಾರ ಭೇದಿ ಆದ ಕೂಡಲೇ ಪ್ರತಿ ಬಾರಿ ಅತಿಸಾರ ಭೇದಿಯ ನಂತರ ಓ.ಆರ್.ಎಸ್. ದ್ರಾವಣ ನೀಡಬೇಕು. ಪ್ರತಿ ದಿನ 1 ಜಿಂಕ್ ಮಾತ್ರೆಯನ್ನು 1 ಚಮಚ ಕುಡಿಯುವ ನೀರು ಅಥವಾ ತಾಯಿ ಹಾಲಿನಲ್ಲಿ ಮಿಶ್ರಣ ಮಾಡಿ 14 ದಿನಗಳ ವರೆಗೆ ಕುಡಿಸಬೇಕು.
ಅತಿಸಾರ ಭೇದಿ ಆದ ಕೂಡಲೇ ಅಥವಾ ನಂತರ ತಾಯಿ ಎದೆ ಹಾಲು ಮತ್ತು ಪೂರಕ ಆಹಾರ ನಿಲ್ಲಿಸದೇ ಮುಂದುವರಿಸುತ್ತೀರಿ. ಜಿಂಕ್ ಮಾತ್ರೆ ವಯಸ್ಸಿಗನುಗುಣವಾಗಿ ನುಂಗಿಸಲಾಗುವುದು ಎಂದು ವಿವರಿಸಿದರು.
ತಾಲ್ಲೂಕು ಮೇಲ್ವಿಚಾರಕ ರಂಗರಾವ್ ಕುಲಕರ್ಣಿ ಐಕೂರ, ಶಿಶು ಅಭಿವೃದ್ಧಿ ಅಧಿಕಾರಿ ಸರೋಜಾ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.