ರಾಯಚೂರು: ನಗರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ವಿವಿಧೆಡೆ ನಿರ್ಮಿಸಿರುವ ಓವರ್ಹೆಡ್ ಟ್ಯಾಂಕ್ಗಳ ನಿರ್ವಹಣೆ ಕಾರ್ಯ ಸಮರ್ಪಕವಾಗಿಲ್ಲ.
ನೀರು ಸಂಗ್ರಹಿಸುವುದು, ಆ ಮೂಲಕ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡುವ ಕಾರ್ಯಕ್ಕಾಗಿ ಟ್ಯಾಂಕ್ಗಳನ್ನು ದಶಕಗಳಿಂದ ಬಳಸಲಾಗುತ್ತಿದೆ. ಕಾಲಕಾಲಕ್ಕೆ ಟ್ಯಾಂಕ್ಗಳಲ್ಲಿನಪಾಚಿಯನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಟ್ಯಾಂಕ್ ಸುತ್ತಲೂ ಶುಚಿತ್ವ ಕಾಪಾಡಬೇಕು. ಆದರೆ, ಓವರ್ಹೆಡ್ ಟ್ಯಾಂಕ್ ನೆರೆಹೊರೆ ಜನರು ಹೇಳುವ ಪ್ರಕಾರ, ಟ್ಯಾಂಕ್ ಸ್ವಚ್ಛತಾ ಕಾರ್ಯ ಮಾಡಿಯೇ ಇಲ್ಲ!
ನಗರದಲ್ಲಿ 24/7 ನಿರಂತರ ನೀರು ಪೂರೈಸುವ ಉದ್ದೇಶಕ್ಕಾಗಿ ₹57 ಕೋಟಿ ವೆಚ್ಚದಲ್ಲಿ ಹೊಸದಾಗಿ 14 ಓವರ್ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಸದ್ಯ ಒಟ್ಟು 25 ಓವರ್ಹೆಡ್ ಟ್ಯಾಂಕ್ಗಳಿವೆ. ಅವುಗಳಲ್ಲಿ ಬಹುತೇಕ ಟ್ಯಾಂಕ್ಗಳ ಸುತ್ತಮುತ್ತಲಿನ ಪರಿಸರ ಹದಗೆಟ್ಟಿದೆ. ಓವರ್ಹೆಡ್ ಟ್ಯಾಂಕ್ಗೆ ಹೊಂದಿಕೊಂಡು ತಿಪ್ಪೆರಾಶಿ ಹಾಕಲಾಗಿದೆ. ತಿಮ್ಮಾಪುರ ಪೇಟೆಯಲ್ಲಿ ಓವರ್ಹೆಡ್ ಟ್ಯಾಂಕ್ ಬಳಿ ಶೌಚಾಲಯ ನಿರ್ಮಿಸಲಾಗಿದ್ದು, ಸುತ್ತಮುತ್ತಲೂ ದುರ್ವಾಸನೆ ಹರಡಿಕೊಂಡಿದೆ.
ಬಹಳಷ್ಟು ಕಡೆ ಟ್ಯಾಂಕ್ಗೆ ಅಳವಡಿಸಿರುವ ಲೋಹದ ಏಣಿಗಳು ತುಕ್ಕು ಹಿಡಿದು ಮುರಿದು ಬಿದ್ದಿವೆ. ಕೆಲವು ಕಡೆ ಸಿಮೆಂಟ್ ಕಿತ್ತುಕೊಂಡಿದ್ದು, ನಿರ್ವಹಣೆಯಾಗುತ್ತಿಲ್ಲ ಎಂಬುದು ಮೇಲ್ನೊಟದಲ್ಲೇ ಮನವರಿಕೆ ಆಗುತ್ತದೆ. ಟ್ಯಾಂಕ್ ಪರಿಸರವು ವಾಕರಿಕೆ ತರಿಸುತ್ತಿದ್ದು, ಪ್ರತಿದಿನ ಟ್ಯಾಂಕ್ ದುಃಸ್ಥಿತಿ ಗಮನಿಸುವ ಜನರು ಅವುಗಳನ್ನು ಕುಡಿಯುವುದಕ್ಕೆ ಬಳಕೆ ಮಾಡುತ್ತಿಲ್ಲ.
ಗಂಗಾನಿವಾಸ ಟ್ಯಾಂಕ್ ಸುತ್ತಮುತ್ತಲೂ ಜನರು ಗಲೀಜು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ರೀತಿಯಲ್ಲಿ ಆವರಣಗೋಡೆ ನಿರ್ಮಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.