ರಾಯಚೂರು: ‘ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಪಾಲಕರು ವ್ರತಗಳನ್ನು ಮಾಡುವ ಬದಲಿದೆ. ಮೊಬೈಲ್ ಮುಕ್ತವಾಗಿದ್ದು ಜೀವನ ನಡೆಸುವ ವ್ರತ ಆಚರಿಸಬೇಕು’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಹೇಳಿದರು.
ನಗರದ ಬಸವಶ್ರೀ ಶಾಲೆಯಲ್ಲಿ ಈಚೆಗೆ ನಡೆದ 17ನೇ ಶಾಲಾ ವಾರ್ಷಿಕೋತ್ಸವ ‘ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಮೊಬೈಲ್ನಲ್ಲಿ ತಲ್ಲೀನರಾಗಿದ್ದು ಮಕ್ಕಳ ಬೆಳವಣಿಗೆಯ ಕಡೆ ಗಮನ ಹರಿಸುತ್ತಿಲ್ಲ. ಮಕ್ಕಳು ಸಂಸ್ಕೃತಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪಾಲಕರು ಮೊಬೈಲ್ನಿಂದ ದೂರವಿದ್ದು ದಿನದ ಎರಡು ಗಂಟೆಯಾದರೂ ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆತು ಅಭ್ಯಾಸದ ಕಡೆ ಗಮನ ಹರಿಸಲು ಪ್ರೋತ್ಸಹಿಸಿದರೆ ಮಾತ್ರ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡುವುದಕ್ಕಿಂತ ಉತ್ತಮ ಸಂಸ್ಕೃತಿಯನ್ನು ಕೊಟ್ಟಾಗ ಉತ್ತಮ ನಾಗರಿಕರನ್ನು ದೇಶಕ್ಕೆ ಕೊಡಲು ಸಾಧ್ಯ ಎಂದು ಹೇಳಿದರು.
‘ಇನ್ನರ್ವೈಸ್’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿವಿಧ ಸಂಸ್ಕೃತಿಯ ಪ್ರತೀಕವಾಗಿ ಕರ್ನಾಟಕದ ಯಕ್ಷಗಾನ, ರಾಜಸ್ತಾನದ ಕಲ್ಬೇಲಿಯಾ, ಮಿಜೋರಂನ ಚರ್ವ, ಮಹಾರಾಷ್ಟ್ರದ ಲಾವಣಿ, ತಮಿಳುನಾಡಿನ ಭರತ ನಾಟ್ಯ ಸೇರಿದಂತೆ ವಿವಿಧ ರಾಜ್ಯಗಳ ಹೆಸರಾದ ನೃತ್ಯಗಳನ್ನೊಳಗೊಂಡ ಸಂಸ್ಕೃತಿ ಉತ್ಸವವು ವರ್ಣರಂಜಿತವಾಗಿ ನೇರವೇರಿತು.
ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಸವನಗೌಡ ಹಾಗೂ ಶಾಲಾ ಸಂಸ್ಥಾಪಕಿ ಲಲಿತಾ ಎಂ. ಇದ್ದರು. ಪಲ್ಲವಿ ನಿರೂಪಿಸಿದರು. ವಿದ್ಯಾರ್ಥಿನಿ ಶೋಭಾ ಸ್ವಾಗತಿಸಿದರು. ರುಖಿಯಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.