ಸಿಂಧನೂರು: ‘ಕಾವ್ಯ ಕೃಷಿಯಲ್ಲಿ ತೊಡಗುವ ಆಸಕ್ತರು ಕಾವ್ಯ, ಕತೆ, ಕಾದಂಬರಿಗಳನ್ನು ಅಧ್ಯಯನ ಮಾಡಬೇಕು. ಆಳವಾದ ಅಧ್ಯಯನ ಮಾತ್ರ ಸತ್ವಯುತ ಕಾವ್ಯ ಸೃಷ್ಟಿಗೆ ಸಹಾಯಕವಾಗುತ್ತದೆ’ ಎಂದು ಕವಿ ಆರೀಫ್ ರಾಜಾ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ದಲಿತ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ದಶಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ಕಾವ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶೋಷಿತರ ನೋವು ಮತ್ತು ಸಮಾನತೆಯನ್ನು ಬಿತ್ತುವ ಹಾಡುಗಳನ್ನು ಬರೆದಿರುವ ಆರ್.ಮಾನಸಯ್ಯ, ಸಿ.ದಾನಪ್ಪ ನಿಲೋಗಲ್, ರಮೇಶ ಗಬ್ಬೂರ ಅವರನ್ನು ವಿದ್ವತ್ ವಲಯ ಸಾಹಿತ್ಯ ಲೋಕದಿಂದ ದೂರವಿಟ್ಟಿದೆ. ವಿಮರ್ಶೆಯಲ್ಲಿ ಅವರ ಸಾಹಿತ್ಯವನ್ನು ಪರಿಗಣಿಸದಿರುವುದು ಸಾಹಿತ್ಯಕ್ಕೆ ಮಾಡುವ ಅವಮಾನವೇ ಹೊರತು ಕೃತಿಕಾರರಿಗಲ್ಲ’ ಎಂದರು.
ಕಾವ್ಯದ ಕುರಿತು ಸಂಶೋಧನೆ ಮಾಡುವವರು ಹೋರಾಟದ ಹಾಡುಗಳನ್ನು ಬರೆದು ಜನರಲ್ಲಿ ಜಾಗೃತಿಯ ಕಿಚ್ಚು ಹೊತ್ತಿಸುವ ಮೂಲಕ ಸಾಹಿತ್ಯದ ನಿಜವಾದ ಉದ್ದೇಶ ಅನಾವರಣ ಮಾಡಿದ್ದಾರೆ. ಅವರ ಹಾಡುಗಳನ್ನು ವಿಶ್ವವಿದ್ಯಾಲಯದ ಪಾಂಡಿತ್ಯ ವಲಯ ಪರಿಗಣಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.ಸುಮಾರು 38 ಕವಿಗಳು ಕವನ ವಾಚನ ಮಾಡಿದರು. ದಸಾಪ ಜಿಲ್ಲಾ ಘಟಕದ ಘಟಕದ ಅಧ್ಯಕ್ಷ ತಾಯರಾಜ ಮರ್ಚಟಾಳ ಅಧ್ಯಕ್ಷತೆ ವಹಿಸಿದ್ದರು. ಪಾಟೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಪಾಟೀಲ, ದಸಾಪ ಸಂಘಟನಾ ಸಂಚಾಲಕ ಮಂಜುನಾಥ ಗಾಂಧಿನಗರ ಇದ್ದರು.ನಂತರ ನಡೆದ ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸಕ ಚಂದ್ರಶೇಖರ ಗೊರಬಾಳ ಮಾತನಾಡಿ ದರು.
ಸಾಧಕರಿಗೆ ಸನ್ಮಾನ: ಡಿ.ಎಚ್.ಕಂಬಳಿ (ಸಂಕೀರ್ಣ), ನಾಗಪ್ಪ ಹೂವಿನಬಾವಿ (ಸಾಹಿತ್ಯ), ಯಂಕಪ್ಪ ಚಿಕ್ಕಬೇರಿಗಿ, ಕೊಟ್ರೇಶ.ಬಿ (ಶಿಕ್ಷಣ), ಜಾನಿ ಕಂಡಕ್ಟರ್ (ರಂಗಭೂಮಿ), ನಾರಾಯಣಪ್ಪ ಮಾಡ ಸಿರವಾರ, ರತ್ನಮ್ಮ ಜೋಗತಿ, ಚಿನ್ನಪ್ಪ ಯಾಪಲಪರ್ವಿ, ಕಂಠೆಪ್ಪ ಪರಾಪುರ (ಜಾನಪದ), ಜೆ.ರಾಯಪ್ಪ ವಕೀಲ (ನ್ಯಾಯಾಂಗ), ಉಸ್ಮಾನಪಾಷಾ, ಸೂಲಗಿತ್ತು ಗಂಗಮ್ಮ ಸುಕಾಲಪೇಟೆ (ಸಾಮಾಜಿಕ ಸೇವೆ), ಶಿವರಾಜ ನಾಯಕ (ಕೃಷಿ), ದೇವೇಂದ್ರ ಹುಡಾ, ಸೋಮಶೇಖರ ಮುರಾರಿ (ಚಿತ್ರಕಲೆ) ಹಾಗೂ ಶ್ರವಣ್ ಕುಮಾರ (ಸಂಗೀತ) ಅವರನ್ನು ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.