ADVERTISEMENT

ಕೊಳವೆಬಾವಿ ಕೊರೆಸಲು ಪರವಾನಿಗೆ ಕಡ್ಡಾಯ: ಡಿಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 12:41 IST
Last Updated 2 ಅಕ್ಟೋಬರ್ 2021, 12:41 IST
ಡಾ.ಬಿ.ಸಿ.ಸತೀಶ್‌
ಡಾ.ಬಿ.ಸಿ.ಸತೀಶ್‌   

ರಾಯಚೂರು: ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ಮತ್ತು ಅಂತರ್ಜಲ ಅತಿಬಳಕೆ ನಿಯಂತ್ರಣ ಮಾಡುವ ಸಲುವಾಗಿ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ ಅಧಿನಿಯಮ ಜಿಲ್ಲೆಗೂ ಅನ್ವಯಿಸುವಂತೆ ಜಾರಿಗೆ ತರಬೇಕು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂರ್ತಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂತರ್ಜಲ ಮೌಲೀಕರಣ 2017ರ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ದೇವದುರ್ಗ. ಮಾನ್ವಿ ಮತ್ತು ಸಿಂಧನೂರು ತಾಲ್ಲೂಕುಗಳು ಸುರಕ್ಷಿತ ಎಂದು, ಲಿಂಗಸೂಗೂರು ಮತ್ತು ರಾಯಚೂರು ತಾಲ್ಲೂಕುಗಳು ಅರೆಕ್ಲೀಷ್ಟಕರ ವರ್ಗದಲ್ಲಿವೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ಏಜೆನ್ಸಿ ಅಥವಾ ರಿಂಗ್ ವಾಹನಗಳಿಂದ ಮಾತ್ರ ಕೊಳವೆ ಬಾವಿ ಕೊರೆಯಿಸಬೇಕು. ಈಲ್ಲೆಯಲ್ಲಿ 14 ರಿಂಗ್ ವಾಹನಗಳು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾಗಿವೆ ಎಂದು ಅಂತರ್ಜಲ ಸಮಿತಿಯ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಜಮೀನು ಅಥವಾ ನಿವೇಶನದಲ್ಲಿ ಕೊಳವೆ ಬಾವಿ ಕೊರೆಸಲು 15 ದಿನಗಳ ಮುನ್ನ ಗ್ರಾಮ ಪಂಚಾಯಿತಿ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು ಎಂದರು.

ಕೊಳವೆ ಬಾವಿ ವಿಫಲವಾದಲ್ಲಿ ಚಿಕ್ಕ ಮಕ್ಕಳು ಬೀಳದಂತೆ ಅದನ್ನು ಕಲ್ಲುಗಳಿಂದ ಸುರಕ್ಷಿತವಾಗಿ ಮುಚ್ಚಬೇಕು. ತಪ್ಪಿದಲ್ಲಿ ಜಮೀನು, ನಿವೇಶನದ ಮಾಲೀಕರು ಮತ್ತು ರಿಂಗ್ ವಾಹನದ ಮಾಲೀಕರು ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿಲ್ಲಾ ಅಂತರ್ಜಲ ಕಚೇರಿಯಿಂದ ಅಂತರ್ಜಲ ಬಳಸಲು ನಿರಾಕ್ಷೇಪಣಾ ಪತ್ರ ಪಡೆಯದೇ ಇರುವ ಕೈಗಾರಿಕೆ, ವಾಣಿಜ್ಯೋದ್ಯಮಗಳು, ಶುದ್ಧನೀರಿನ ಘಟಕಗಳು ನವೆಂಬರ್ 30 ರೊಳಗಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್ ದುರುಗೇಶ್, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣ, ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.