ರಾಯಚೂರು: ಫೋಟೊ ತೆಗೆಯುವ ನೆಪದಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದ ಆರೋಪ ಹೊತ್ತಿರುವ ಬಾಲಕಿಯ ಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೊ ಪ್ರಕರಣ ದಾಖಲಾಗಿದೆ.
‘ನಾನು ಅಪ್ರಾಪ್ತ ವಯಸ್ಸಿನವಳೆಂದು ಗೊತ್ತಿದ್ದರೂ ಏಪ್ರಿಲ್ 18ರಂದು ಶಕ್ತಿನಗರದ ಬಸವಕಲ್ಯಾಣ ಮಂಟಪದಲ್ಲಿ ಶಕ್ತಿನಗರದ ತಾತಪ್ಪ ಅವರೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯಾದ 11ನೇ ದಿನಕ್ಕೆ ಏಪ್ರಿಲ್ 28ರಂದು ಪ್ರಸ್ತದ ಹೆಸರಲ್ಲಿ ತಾತಪ್ಪ ದೈಹಿಕ ಸಂಪರ್ಕ ಮಾಡಿದ್ದಾರೆ’ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾಳೆ.
ತಾತಪ್ಪನ ಮದುವೆ ಮಾಡಿಸಿದ ಶಕ್ತಿನಗರದ ತಾತಪ್ಪ ನರಸಯ್ಯ, ಗದ್ದೆಮ್ಮ ನರಸಯ್ಯ, ಯಾದಗಿರಿ ಜಿಲ್ಲೆಯ ಜೆಂಗಿನಗಡ್ಡಿಯ ಸುಮಂಗಲಾ ವೀರೇಶ ಗೀತಾ ಆಂಜನೇಯ, ಆಂಜನೇಯ, ಶಕ್ತಿನಗರದ ಗದ್ದೆಪ್ಪ ನರಸಯ್ಯ, ರೇಣುಕಾ ಗದದೆಪ್ಪ, ಸದಾನಂದ ನರಸಯ್ಯ, ಮಹಾದೇವಿ ಸದಾನಂದ ಹಾಗೂ ರಾಮನಗೌಡ ವಿರುದ್ಧ ಬಾಲ್ಯ ವಿವಾಹ ನಿಷೇಧ ಪ್ರಕರಣ ದಾಖಲಾಗಿದೆ.
ದೇವಸುಗೂರಿನ ಪಿಡಿಒ ರವಿಕುಮಾರ ದೂರು ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.