ADVERTISEMENT

ರಾಯಚೂರು | ಕರ್ಫ್ಯೂ ಜಾರಿ: ಜಿಲ್ಲೆಯಾದ್ಯಂತ ರಸ್ತೆಗಿಳಿದ ಪೊಲೀಸರು

ತುರ್ತು ಕೆಲಸಗಳಿಗೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 13:03 IST
Last Updated 8 ಜನವರಿ 2022, 13:03 IST
ರಾಯಚೂರು ನಗರದ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತಕ್ಕೆ ಸಂಚರಿಸುವ ಮಾರ್ಗವನ್ನು ಪೊಲೀಸರು ಶನಿವಾರ ಬಂದ್‌ ಮಾಡಿದ್ದರು
ರಾಯಚೂರು ನಗರದ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತಕ್ಕೆ ಸಂಚರಿಸುವ ಮಾರ್ಗವನ್ನು ಪೊಲೀಸರು ಶನಿವಾರ ಬಂದ್‌ ಮಾಡಿದ್ದರು   

ರಾಯಚೂರು: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಬಿಗಿಗೊಳಿಸಿರುವ ಪೊಲೀಸರು, ಅನಗತ್ಯವಾಗಿ ಜನರು ಸಂಚರಿಸುವುದನ್ನು ಶನಿವಾರ ನಿರ್ಬಂಧಿಸಿದರು.

ಭಾನುವಾರ ಕೂಡಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಜಿಲ್ಲೆಯಾದ್ಯಂತ ಪೊಲೀಸರೆಲ್ಲರೂ ರಸ್ತೆಗಿಳಿದು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಮತ್ತು ಜನರನ್ನು ವಿಚಾರಿಸುತ್ತಿರುವುದು ಕಂಡು ಬರುತ್ತಿದೆ. ಗುರುತಿನ ಚೀಟಿ ಹಾಗೂ ಉದ್ದೇಶವನ್ನು ಆಧರಿಸಿ ಸಂಚಾರ ಮಾಡುವುದಕ್ಕೆ ಅವಕಾಶ ನೀಡುತ್ತಿದ್ದಾರೆ. ಇದಕ್ಕಾಗಿ ರಾಯಚೂರಿನ ಪ್ರಮುಖ ವೃತ್ತಗಳಲ್ಲಿ ನಾಕಾಬಂದಿ ಹಾಕಲಾಗಿದೆ.

ಪ್ರತಿದಿನ ಜನಸಂದಣಿಯಿಂದ ಕೂಡಿರುತ್ತಿದ್ದ ಕೇಂದ್ರ ಬಸ್‌ ನಿಲ್ದಾಣ, ಸೂಪರ್‌ ಮಾರ್ಕೆಟ್‌, ಗಂಜ್‌, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಡಾ.ಬಾಬು ಜಗಜೀವನರಾಂ ವೃತ್ತಗಳಲ್ಲಿ ಬೆರಳೆಣಿಕೆಯಷ್ಟು ಜನ ಸಂಚಾರ ಕಂಡುಬಂತು. ಸರ್ಕಾರಿ ಬಸ್‌ಗಳು, ಸರಕು ಸಾಗಿಸುವ ವಾಹನಗಳು, ಆಟೊಗಳು ಸಂಚರಿಸುವುದಕ್ಕೆ ಅನುಮತಿ ನೀಡಿದ್ದರೂ, ಪ್ರಯಾಣಿಕರಿರಲಿಲ್ಲ. ಸರಕು ಸಾಗಿಸುವ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ಆದರೂ ಪೊಲೀಸರು ಕೆಲವು ವಾಹನಗಳನ್ನು ತಡೆದು, ದಾಖಲೆಗಳನ್ನು ಪರಿಶೀಲಿಸಿದರು.

ADVERTISEMENT

ಹೋಟೆಲ್‌, ರೆಸ್ಟಾರೆಂಟ್‌, ಬಾರ್‌ಗಳು, ಹಣ್ಣಿನ ಅಂಗಡಿಗಳು, ಕಿರಾಣಿ ಅಂಗಡಿ, ಮಾಂಸದಂಗಡಿಗಳು, ತರಕಾರಿ ಮಳಿಗೆಗಳು, ಔಷಧಿ ಅಂಗಡಿಗಳು ಹಾಗೂ ಆಸ್ಪತ್ರೆಗಳು ತೆರೆದುಕೊಂಡಿದ್ದವು. ಆದರೆ ಪಾರ್ಸಲ್‌ ತೆಗೆದುಕುಕೊಂಡು ಹೋಗುವುದಕ್ಕೆ ಅವಕಾಶವಿತ್ತು. ಆಸ್ಪತ್ರೆ, ಔಷಧಿ ಮಳಿಗೆಗಳು, ದಿನಪತ್ರಿಕೆ ಹಂಚಿಕೆಗೆ ಯಾವುದೇ ತೊಂದರೆ ಇರಲಿಲ್ಲ. ಇನ್ನುಳಿದಂತೆ ಎಲ್ಲ ಮಳಿಗೆಗಳು ಬಂದ್‌ ಆಗಿದ್ದವು. ಕಪಡಾ ಬಜಾರ್‌, ಚಂದ್ರಮೌಳೇಶ್ವರ ವೃತ್ತ ಬಿಕೋ ಎನ್ನುತ್ತಿದ್ದವು.

ರಸ್ತೆಗಳು ಬಂದ್‌: ನಗರದಲ್ಲಿ ಜನರ ಓಡಾಟ ನಿರ್ಬಂಧಿಸುವುದಕ್ಕಾಗಿ ಕೆಲವು ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತಾಗಿದೆ.

ಲಾಕ್‌ಡೌನ್ ಅವಧಿಯಲ್ಲಿದ್ದ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಮುಂದಾಗಿರುವ ಪೊಲೀಸರು, ಸಕಾರಣವಿಲ್ಲದೆ ಸಂಚರಿಸಲು ಯಾರನ್ನು ಬಿಡುತ್ತಿಲ್ಲ. ಅನಗತ್ಯ ಸಂಚಾರಿಗಳ ಬೈಕ್ ವಶಕ್ಕೆ ಪಡೆಯಲಾಗುತ್ತಿದೆ.‌

ನಗರದ ಬಸವೇಶ್ವರ ವೃತ್ತದಿಂದ ಮಾರ್ಕೆಟ್‌, ರಂಗಮಂದಿರದಿಂದ ವಿದ್ಯಾಭಾರತಿ ರಸ್ತೆ ಸೇರಿದಂತೆ ಹಲವು ಕಡೆ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರ್ಕಾರಿ ಬಸ್ ಕೂಡಾ ನಗರದಲ್ಲಿ ಸುತ್ತುವರಿದು ಸಂಚರಿಸುತ್ತಿವೆ. ಜನರು ವಿವಿಧ ಊರುಗಳಿಗೆ ಸಂಚರಿಸುವುದಕ್ಕೆ ಅವಕಾಶ ಇದ್ದರೂ, ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಜನಸಂದಣಿ ಇಲ್ಲ. ಬೆರಳೆಣಿಕೆಯಷ್ಟು ಪ್ರಯಾಣಿಕರೊಂದಿಗೆ ಬಸ್‌ಗಳು ಸಂಚರಿಸುತ್ತಿರುವುದು ಕಂಡುಬಂತು.

ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಜನರು ಹಾಗೂ ವಾಹನಗಳ ಸಂಚಾರ ಎಂದಿನಂತಿಲ್ಲ. ಇನ್ನುಳಿದಂತೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಮತ್ತು ವಾಹನಗಳ ಓಡಾಟ ಎಂದಿನಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.