ಸಿರವಾರ: ತಾಲ್ಲೂಕು ಕೇಂದ್ರಕ್ಕೆ ಅಗತ್ಯ ಕಚೇರಿಗಳನ್ನು ಮಂಜೂರು ಮಾಡಬೇಕು. ಹೆಚ್ಚಿನ ಅನುದಾನ ನೀಡಬೇಕು. ಅಧಿಕಾರಗಳನ್ನು ನೇಮಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಶಿರೇಸ್ತಾದಾರ್ ವಿಜಯಕುಮಾರ ಸುಗಂಧಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪಟ್ಟಣ ನೂತನ ತಾಲ್ಲೂಕು ಕೇಂದ್ರವಾಗಿ 4 ವರ್ಷಗಳು ಗತಿಸಿದರೂ ಕೇವಲ ಎರಡು ಮೂರು ಇಲಾಖೆಗಳು ಮಾತ್ರ ಕಚೇರಿಗಳನ್ನು ತೆರೆದಿವೆ. 20ಕ್ಕೂ ಹೆಚ್ಚು ಪ್ರಮುಖ ಇಲಾಖೆ ಕಚೇರಿಗಳನ್ನು ಮಂಜೂರು ಮಾಡದೇ ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಇದರಿಂದ ಪ್ರತಿಯೊಬ್ಬರೂ ಮಾನ್ವಿಗೆ ಅಲೆದಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೂಡಲೇ ಮಿನಿ ವಿಧಾನಸೌಧ, ಕೋರ್ಟ್, ನೋಂದಣಿ ಕಚೇರಿ, ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಎಪಿಎಂಸಿ, ಹತ್ತಿ, ಭತ್ತ ಶಾಶ್ವತ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಂಗನಾಥ ಪಾಟೀಲ, ಕೆ. ವೇದವ್ಯಾಸ, ಬಿ.ವಿಜೇಂದ್ರ, ಮಂಜುನಾಥ ನಾಯಕ, ಎಂ.ನಾಗರಾಜ ಹಾಗೂ ವೆಂಕಟೇಶ ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.