ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾದ ಅಗ್ನಿಪಥ್ ಯೋಜನೆ ವಿರೋಧಿಸಿ ಆಲ್ ಇಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿಎಸ್ಒ) ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಜೂನ್ 14ರಂದು ಕೇಂದ್ರ ಸರ್ಕಾರ ಘೋಷಿಸಿದ ವಿನೂತನ ನೇಮಕಾತಿ ಯೋಜನೆಗಳು ದೇಶದ ಕೋಟ್ಯಂತರ ನಿರುದ್ಯೋಗಿ ಯುವಕರಿಗೆ ಭ್ರಮೆಯಲ್ಲಿಡುವಂತಾಗಿದೆ. ಮುಂದಿನ 18 ತಿಂಗಳುಗಳೊಳಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 10 ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ರಕ್ಷಣಾ ಪಡೆಗೆ ಸಂಬಂಧಿಸಿದ ‘ಅಗ್ನಿಪಥ್’ ಯೋಜನೆ ಮೂಲಕ ಸರ್ಕಾರ ನಿರುದ್ಯೋಗಿ ಯುವಕರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
2020ರ ಮಾರ್ಚ್ 1 ಕ್ಕೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷ ಖಾಲಿ ಹುದ್ದೆಗಳಿರುವುದಾಗಿ ಸರ್ಕಾರವು ಸಂಸತ್ತಿನಲ್ಲಿ ಹೇಳಿತ್ತು. ಖಾಸಗಿ ವಲಯದಲ್ಲೂ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗೆ ಬಿಗಡಾಯಿಸಿದೆ ಎಂದರೆ, ದೇಶದಲ್ಲಿನ ಸುಮಾರು 45 ಕೋಟಿ ಅರ್ಹ ನಿರುದ್ಯೋಗಿಗಳು ಕೆಲಸ ಹುಡುಕುವುದನ್ನೇ ನಿಲ್ಲಿಸಿದ್ದಾರೆ.
ಮೋದಿ ಸರ್ಕಾರ ಈ ಆಘಾತಕಾರಿ ಅಂಶಗಳತ್ತ ಗಮನ ನೀಡದೆ, ಇಲ್ಲಿಯವರೆಗೂ ನಿರುದ್ಯೋಗ ಸಮಸ್ಯೆಯೇ ಇಲ್ಲವೆಂದು ವಾದಿಸುತ್ತಾ ಬಂದೆ. ಈಗ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಮಾತನಾಡುತ್ತಿದೆ. ಇದು ಮುಂದಿರುವ ರಾಜ್ಯ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಮಾಡುತ್ತಿರುವ ರಾಜಕೀಯ ತಂತ್ರವಾಗಿದೆ ಎಂದು ಆರೋಪಿಸಿದರು.
ಎಐಡಿವೈಒ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್, ಜಿಲ್ಲಾ ಕಾರ್ಯದರ್ಶಿ ವಿನೊದ್ ಪುಚ್ಚಲದಿನ್ನಿ, ಹಯ್ಯಾಳಪ್ಪ, ಮಹೇಶ ಚಿಕಲಪರ್ವಿ, ಪೀರ್ ಸಾಬ್, ಅಭಿಲಾಷ್, ಕೃಷ್ಣ, ಮಲ್ಲಿಕಾರ್ಜುನ್, ನಂದಗೋಪಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.