ರಾಯಚೂರು:ಆರು ತಿಂಗಳು ವೇತನ ಬಾಕಿ ನೀಡುವಂತೆ ಒತ್ತಾಯಿಸಿ ಹೊರಗುತ್ತಿಗೆ ಪೌರಕಾರ್ಮಿಕರು ಮಂಗಳವಾರ ನಗರಸಭೆಗೆ ಮುತ್ತಿಗೆ ಹಾಕಿದರು.
ನಗರಸಭೆಯ ಗುತ್ತಿಗೆ ನೌಕರರು, ಕಾಯಂ ನೌಕರರು ಸೇರಿದಂತೆ ಒಟ್ಟು 600 ಜನ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ. ಕೆಲವರಿಗೆ ಎರಡು ತಿಂಗಳ ವೇತನ ಪಾವತಿ ಮಾಡಿಲ್ಲ. ಇನ್ನೂ ಹಲವರಿಗೆಐದು ತಿಂಗಳ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಐದು 5 ತಿಂಗಳಿನಿಂದ ವೇತನ ಪಾವತಿ ಮಾಡದ ಕಾರಣ ಮನೆಯ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ವೇತನವಿಲ್ಲದೇ ಬದುಕು ದುಸ್ತರವಾಗಿದೆ ಎಂದು ಪ್ರತಿಭಟನಾನಿರತ ಪೌರಕಾರ್ಮಿಕ ತಿಮಲಮ್ಮ ಅಳಲು ತೋಡಿಕೊಂಡರು.
ತಕ್ಷಣ ವೇತನ ನೀಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು. ಆಧಿಕಾರಿಗಳು ಸಮಜಾಯಿಷಿ ನೀಡಿದರು.
ನಗರಸಭೆಯ ಮ್ಯಾನೇಜರ್ ನಾಗರಾಜ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪೌರಾಯುಕ್ತರು ರಜೆಯ ಮೇಲೆ ಹೋಗಿರುವುದರಿಂದ ವೇತನವಾಗಿಲ್ಲ. ಈಗ ನಗರಾಭಿವೃದ್ದಿ ಕೋಶ ಯೋಜನಾಧಿಕಾರಿಗಳೊಂದಿಗೆ ಮಾತನಾಡಿ ವೇತನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.