ರಾಯಚೂರು: ರಾಜ್ಯ ಬಜೆಟ್ನಲ್ಲಿ ದಲಿತ, ದೇವದಾಸಿ ಮಹಿಳೆಯರಿಗೆ ಅನುದಾನ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಹಾಗೂ ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಎರಡು ದಶಕದಿಂದ ಆರ್ಥಿಕ ಬಿಕ್ಕಟ್ಟು, ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್ ಲಾಕ್ಡೌನ್ನಿಂದ ತತ್ತರಿಸಿದ್ದು ಬಜೆಟ್ನಲ್ಲಿ ಜಾತಿ ತಾರತಮ್ಯ ಮತ್ತು ಕೃಷಿ ಕ್ಷೇತ್ರ ಆಧುನೀಕರಣದಿಂದ ಕೂಲಿ ಕೆಲಸ ಕಡಿತವಾಗಿದೆ. ನಿರುದ್ಯೋಗ ಭತ್ಯೆಯೂ ನೀಡುತ್ತಿಲ್ಲ. ಪರಶಿಷ್ಟರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೀಡುತ್ತಿದ್ದ ಫೆಲೋಶಿಪ್ ಕಡಿತಗೊಳಿಸಿದೆ ಎಂದು ದೂರಿದರು.
ಬಜೆಟ್ನಲ್ಲಿಯೇ ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯನ್ನು ₹3 ಸಾವಿರ ಹೆಚ್ಚಿಸಬೇಕು. ಗಣತಿ ಪಟ್ಟಿಯಲ್ಲಿ ಇರದ ದೇವದಾಸಿ ಮಹಿಳೆಯರನ್ನು ಪಟ್ಟಿಗೆ ತಕ್ಷಣ ಸೇರ್ಪಡೆ ಮಾಡಬೇಕು. ದೇವದಾಸಿ ಮಹಿಳೆಯರ ಮಕ್ಕಳ ನಡುವೆ ವಿವಾಹವಾದವರಿಗೂ ಪ್ರೋತ್ಸಹಧನ ಒದಗಿಸಬೇಕು. ಮಶಾಣ ಕಾರ್ಮಿಕರನ್ನು ರಾಜ್ಯದಾದ್ಯಂತ ಗಣತಿ ಮಾಡಿ ಅವರಿಗೆ ಮಾಸಿಕ ಸಹಾಯಧನ ತಲಾ ₹3 ಸಾವಿರ ಒದಗಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಶವ ಕುಣಿ ಅಗೆದು ಮುಚ್ಚುವುದನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ಕುಣಿಗೆ ₹3 ಸಾವಿರ ನೀಡಬೇಕು. ಸ್ಮಶಾನಕ್ಕೆ ಒಬ್ಬರನ್ನು ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯಿತಿ ನೌಕರರೆಂದು ಪ್ರಕಟಿಸಬೇಕು. ಪರಿಶಿಷ್ಟರ ಅನುಪಾತದಲ್ಲಿ ಶೇ 50 ರ ಭಾಗದ ಹಣವನ್ನು ಪರಿಶಿಷ್ಟ ಮಹಿಳೆಯರಿಗೆ ಮೀಸಲಿಡಬೇಕು. ದೇವದಾಸಿ ಮಹಿಳೆಯರ ಹಾಗೂ ದಲಿತರ ಸಾಲ ಮನ್ನಾ ಮಾಡಬೇಕು. ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ತಲಾ ₹10 ಸಾವಿರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕಿ ಎಚ್.ಪದ್ಮಾ, ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ. ವೀರೇಶ, ಕಾರ್ಯದರ್ಶಿ ಜೆ.ತಾಯಮ್ಮ, ಆಯ್ಯಮ್ಮ, ಮಲ್ಲೇಶ ಗದಾರ್, ಮಧು, ಸರೋಜಮ್ಮ, ತಿಮಲಮ್ಮ , ನರಸಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.